ಸಿಂಧನೂರು: ತುಂಗಭದ್ರಾ ನೀರಾವರಿ ವಲಯ ಹಂಗಾಮಿ ಕಾರ್ಮಿಕರ ಬೇಡಿಕೆ ಕುರಿತು ಚರ್ಚಿಸಲು ಶೀಘ್ರವೇ ಜಲಸಂಪನ್ಮೂಲ ಇಲಾಖೆಯ ಉನ್ನತ ಅಧಿಕಾರಿಗಳ ಸಭೆ ಕರೆಯಲಾಗುವುದು. ಆ ಸಭೆಯಲ್ಲಿ ಕಾರ್ಮಿಕ ಪ್ರತಿನಿಧಿಗಳನ್ನು ಆಹ್ವಾನಿಸಲಾಗುವುದು’ ಎಂದು ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವ ವೆಂಕಟರಾವ್ ನಾಡಗೌಡ ಭರವಸೆ ನೀಡಿದರು.
ನಗರದ ಪಿಡಬ್ಲ್ಯೂಡಿ ಕ್ಯಾಂಪ್ನಲ್ಲಿರುವ ನೀರಾವರಿ ಇಲಾಖೆ ಮುಂದೆ ತುಂಗಭದ್ರಾ ಹಂಗಾಮಿ ಕಾರ್ಮಿಕರು ಶನಿವಾರ ಎರಡನೇ ದಿನಕ್ಕೆ ಧರಣಿ ಮುಂದುವರೆಸಿದ ಹಿನ್ನೆಲೆಯಲ್ಲಿ ಸಚಿವ ವೆಂಕಟರಾವ್ ನಾಡಗೌಡ ಅವರು ತಮ್ಮ ನಿವಾಸದಲ್ಲಿ ಕಾರ್ಮಿಕ ಮುಖಂಡರೊಂದಿಗೆ ಚರ್ಚಿಸಿ, ಸಮಸ್ಯೆ ಪರಿಹಾರಕ್ಕೆ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ’ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಕಾರ್ಮಿಕರು ನಾಲ್ಕು ತಿಂಗಳ ವೇತನ ಪಾವತಿಸಬೇಕು. ಹೊರಗುತ್ತಿಗೆ ಪಡೆಯಲು ನೀಡಿರುವ ಆದೇಶವನ್ನು ಹಿಂಪಡೆಯಬೇಕು ಹಾಗೂ ಭವಿಷ್ಯ ನಿಧಿಯನ್ನು ಮಂಜೂರು ಮಾಡಿದರೆ ಕೆಲಸಕ್ಕೆ ಹಾಜರಾಗುತ್ತೇವೆ’ ಎಂದು ತಿಳಿಸಿದರು.
‘ಎಡದಂಡೆ ನಾಲೆಯ ನಿರ್ವಹಣೆಗೆ ತೀವ್ರ ತೊಂದರೆ ಆಗಿರುವದರಿಂದ ಸಹಕರಿಸುವಂತೆ ಸಚಿವರು ಮಾಡಿಕೊಂಡ ಮನವಿಗೆ ತಕ್ಷಣ ಏಪ್ರಿಲ್ ತಿಂಗಳಿನಿಂದ ಇಲ್ಲಿಯವರೆಗೆ ವೇತನ ಬಿಡುಗಡೆ ಮಾಡಿ ಟೆಂಡರ್ ರದ್ದು ಮಾಡಿರುವುದಾಗಿ ಹೇಳಿಕೆ ನೀಡಿದರೆ ಈಗಲೇ ಕರ್ತವ್ಯಕ್ಕೆ ಹಾಜರಾಗುತ್ತೇವೆ’ ಎಂದರು.
ನೀರಾವರಿ ವಲಯ ಹಂಗಾಮಿ ಕಾರ್ಮಿಕರ ಸಂಘದ ಅಧ್ಯಕ್ಷ ಆರ್.ಮಾನಸಯ್ಯ, ಪ್ರಧಾನ ಕಾರ್ಯದರ್ಶಿ ಅಡವಿರಾವ್, ಮುಖಂಡರಾದ ಜಿ.ಅಮರೇಶ, ಎಂ.ಗಂಗಾಧರ, ಸಿದ್ದಪ್ಪಗೌಡ, ವಾದಿರಾಜ, ರಮೇಶ ಕೊಟ್ನೇಕಲ್ ಇದ್ದರು.