ರಾಯಚೂರು: ತಾಲ್ಲೂಕಿನ ಗುಂಜಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಬಿಲ್ ಕಲೆಕ್ಟರ್ ಆಗಿ ಕೆಲಸ ಮಾಡುತ್ತಿದ್ದ ಪ್ರಕಾಶ ಆಕಸ್ಮಿಕವಾಗಿ ಸಾವನ್ನಪ್ಪಿದ್ದು, ಅವರ ಕುಟುಂಬದ ಸದಸ್ಯರೊಬ್ಬರಿಗೆ ಅನುಕಂಪದ ಆಧಾರದ ಮೇಲೆ ಉದ್ಯೋಗ ನೀಡಬೇಕೆಂದು ಒತ್ತಾಯಿಸಿ ಸಿಯುಟಿಐ ನೇತೃತ್ವದಲ್ಲಿ ಗ್ರಾಮ ಪಂಚಾಯಿತಿ ಕಚೇರಿ ಮುಂದೆ ಅನಿರ್ಧಿಷ್ಠಾವಧಿ ಧರಣಿ ಆರಂಭಿಸಲಾಗಿದೆ.
23ನೇ ಜನವರಿ 2016 ರಂದು ಪ್ರಕಾಶ ಅವರು ಸಾವನ್ನಪ್ಪಿದ್ದು ಇದರಿಂದ ಕುಟುಂಬ ಆರ್ಥಿಕ ಸಂಕಷ್ಟದಲ್ಲಿದೆ. ಸರ್ಕಾರದ ಆದೇಶದ ಪ್ರಕಾರ ಅನುಕಂಪದ ಆಧಾರದಲ್ಲಿ ಪತ್ನಿಗೆ ಉದ್ಯೋಗ ನೀಡಬಹುದಾಗಿದ್ದು ಬಿಎಸ್ಸಿ ಕಂಪ್ಯೂಟರ್ ವ್ಯಾಸಂಗ ಮಾಡಿರುವ ಸಂಧ್ಯಾಳಿಗೆ ಉದ್ಯೋಗ ನೀಡಬೇಕು. ಈ ಸಂಬಂಧ ಗ್ರಾಮ ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿ ಅಧಿಕಾರಿಗೆ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ ಎಂದು ದೂರಿದರು.
ಪ್ರಕಾಶ್ ಅವರ ಐದು ತಿಂಗಳ ವೇತನ ಹಾಗೂ 15 ತಿಂಗಳ ಉಪಧನ ತಡೆಹಿಡಿಯಲಾಗಿದ್ದು ಕೂಡಲೇ ನೀಡಬೇಕು ಎಂದು ಒತ್ತಾಯಿಸಿದರು.
ಧರಣಿಯಲ್ಲಿ ಹೋರಾಟಗಾರ ಎಸ್.ಮಾರೆಪ್ಪ, ಸಿಯುಟಿಐ ಮುಖಂಡ ಕೆ.ಜಿ.ವೀರೇಶ, ಡಿ.ಎಸ್.ಶರಣಬಸವ, ಸೂಗಪ್ಪ ಪಾಮನಕಲ್ಲೂರು, ಜಗನ್ನಾಥ, ಯಲ್ಲಪ್ಪ , ಹನುಮಂತರೆಡ್ಡಿ, ಗುರುಸ್ವಾಮಿ, ಅಶೋಕ ಇದ್ದರು.