ರಾಯಚೂರು: ಕೊಳೆಗೇರಿ ಅಭಿವೃದ್ಧಿ ಮಂಡಳಿಯ ವಸತಿ ಯೋಜನೆಯಡಿ ನಗರದ ವಿವಿಧೆಡೆ ಕೊಳೆಗೇರಿಗಳಲ್ಲಿ ನಿರ್ಮಾಣ ಹಂತದಲ್ಲಿರುವ ಕಟ್ಟಡ ಕಾಮಗಾರಿ ಸ್ಥಗಿತ ಮಾಡಬಾರದು. ಹಣ ಪಾವತಿಸಲು ಉದ್ದೇಶಪೂರ್ವಕವಾಗಿ ವಿಳಂಬ ಮಾಡುತ್ತಿರುವ ಸಹಾಯಕ ಎಂಜಿನಿಯರ್ ವಿ.ಪಿ.ರಂಗಾವಲಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಶ್ರೀರಾಷ್ಟ್ರೀಯ ದಲಿತ ಸೇನಾ ನಗರ ಸಮಿತಿಯಿಂದ ಶುಕ್ರವಾರ ಧರಣಿ ನಡೆಸಲಾಯಿತು.
ನಗರದ ಕೊಳಚೆ ಪ್ರದೇಶಗಳಲ್ಲಿ ವಸತಿ ಯೋಜನೆಯಡಿ ಕಾಮಗಾರಿ ಆರಂಭಿಸಿ ಎರಡು ವರ್ಷಗಳಾದರೂ ಇದುವರೆಗೆ ಪೂರ್ಣಗೊಂಡಿಲ್ಲ. ಕಾಮಗಾರಿ ವೀಕ್ಷಣೆಗೆ ಒಂದು ಬಾರಿಯೂ ರಂಗಾವಲಿ ಅವರು ಬಂದಿಲ್ಲ. ಎರಡು ತಿಂಗಳಿನಿಂದ ಕಾಮಗಾರಿಗಳು ಸ್ಥಗಿತಗೊಂಡಿದ್ದು ಗುತ್ತಿಗೆದಾರರಿಗೆ ವಿಚಾರಿಸಿದರೆ ಬಿಲ್ ಪಾವತಿಯಾಗಿಲ್ಲ ಎಂದು ಹೇಳುತ್ತಿದ್ದಾರೆ. ಗುತ್ತಿಗೆದಾರರರು, ಫಲಾನುಭವಿಗಳು ಕಚೇರಿಗೆ ಹೋದರೆ ರಂಗಾವಲಿ ಅವರು ಸಂಪರ್ಕಕ್ಕೆ ಸಿಗುವುದಿಲ್ಲ. ದೂರವಾಣಿ ಸಂಪರ್ಕಕ್ಕೂ ಸಿಗದೇ ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ ಎಂದು ದೂರಿದರು.
ಮನೆ ನಿರ್ಮಾಣ ಕಾಮಗಾರಿ ಪೂರ್ಣವಾಗದ ಕಾರಣ ಫಲಾನುಭವಿಗಳು ಬಾಡಿಗೆ ಮನೆ, ತಾತ್ಕಾಲಿಕ ಟೆಂಟ್, ದೇವಸ್ಥಾನಗಳಲ್ಲಿ ವಾಸಿಸುತ್ತಿದ್ದಾರೆ. ಸೊಳ್ಳೆಗಳ ಕಾಟ ಹಾಗೂ ಆರೋಗ್ಯ ಸಮಸ್ಯೆಗಳನ್ನು ಜನರು ಎದುರಿಸುತ್ತಿದ್ದು ಸಹಾಯಕ ಎಂಜಿನಿಯರ್ ರಂಗಾವಲಿ ನಿಷ್ಕಾಳಜಿ ವಹಿಸಿ ಬಡವರ ಜೀವನ ಜೊತೆ ಚೆಲ್ಲಾಟವಾಡುತ್ತಿದ್ದಾರೆ ಎಂದು ಆರೋಪಿಸಿದರು. ಕೂಡಲೇ ಕರ್ತವ್ಯ ಲೋಪದ ಆರೋಪದ ಮೇರೆಗೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಸೇನೆಯ ಜಿಲ್ಲಾ ಘಟಕದ ಅಧ್ಯಕ್ಷ ಶರಣಬಸವ, ಪಿ.ಶ್ರವಣಕುಮಾರ, ಮಾರೆಪ್ಪ, ಅನಂತ,ನಾಗರಾಜ, ಚಂದ್ರ ಶೇಖರ, ಗೋಪಾಲ, ಆಂಜನೇಯ್ಯ, ಅರುಣಕುಮಾರ ಇದ್ದರು.