ಮುದಗಲ್: ಸಮುದಾಯ ಆರೋಗ್ಯ ಕೇಂದ್ರಕ್ಕೆ ಸಿಬ್ಬಂದಿ ನೇಮಿಸಬೇಕು ಎಂದು ಒತ್ತಾಯಿಸಿ ಪಟ್ಟಣದ ನಿವಾಸಿಗಳು ಆರ್.ಸಿ.ಎಂ.ಎಚ್. ಜಿಲ್ಲಾ ಅಧಿಕಾರಿ ಡಾ.ವಿಜಯಾ ಅವರಿಗೆ ಮನವಿ ಮಾಡಿದರು.
ಆಸ್ಪತ್ರೆಯಲ್ಲಿಯ ಅವ್ಯವಸ್ಥೆ ಸರಿಪಡಿಸಬೇಕು. ಮಕ್ಕಳ ಹಾಗೂ ಹೆರಿಗೆ ತಜ್ಞರ ನೇಮಕ ಮಾಡಬೇಕು. ರಾತ್ರಿ ವೇಳೆ ವೈದ್ಯರಿಗೆ ಆಸ್ಪತ್ರೆಯಲ್ಲಿ ಇರುವಂತೆ ಸೂಚಿಸಬೇಕು. ಸಿಬ್ಬಂದಿಗೆ ರೋಗಿಗಳಿಗೆ ಸರಿಯಾಗಿ ಸ್ಪಂದನೆ ಮಾಡುವಂತೆ ಸೂಚಿಸಬೇಕು ಎಂದು ನಾಗರಿಕರು ಒತ್ತಾಯಿಸಿದರು. ಆಸ್ಪತ್ರೆಯಲ್ಲಿಯೇ ಜನನ ಪ್ರಮಾಣ ಪತ್ರ ನೀಡಬೇಕು. ಎಕ್ಸ್ರೇ ಯಂತ್ರ ಚಾಲನೆಯಲ್ಲಿ ಇಡಬೇಕು. ಆಸ್ಪತ್ರೆಯಲ್ಲಿ ಸಮರ್ಪಕವಾಗಿ ಕಾರ್ಯ ನಿರ್ವಹಿಸದ ಸಿಬ್ಬಂದಿ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಮತ್ತೆ ಪ್ರತಿಭಟನೆ ನಡೆಸಲಾಗುವುದು ಎಂದು ಒತ್ತಾಯಿಸಿದರು.
ಪುರಸಭೆ ಉಪಾಧ್ಯಕ್ಷ ಶಿವನಾಗಪ್ಪ ಬಡಕುರಿ, ಸದಸ್ಯರಾದ ಅಜ್ಮೀರ್ ಬೆಳ್ಳಿಕಟ್ಟ, ತಸ್ಲೀಂ ಮುಲ್ಲಾ, ಭಾರತೀಯ ದಲಿತ ಪ್ಯಾಂಥರ್ ಮುದಗಲ್ ಘಟಕದ ಅಧ್ಯಕ್ಷ ಕೃಷ್ಣ ಚಲುವಾದಿ ಹಾಗೂ ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷ ಮಹಾಂತೇಶ ಪಾಟೀಲ ಸೇರಿ ಹಲವರು ಇದ್ದರು.