ರಾಯಚೂರು: ‘ಜಿಲ್ಲೆಯ ಖಾಸಗಿ ಆಸ್ಪತ್ರೆಗಳಿಗೆ ಆಮ್ಲಜನಕ ಪೂರೈಕೆ ಆಗುವುದನ್ನು ನಿಲ್ಲಿಸಿಲ್ಲ. ಆದರೆ ನವೋದಯ ವೈದ್ಯಕೀಯ ಕಾಲೇಜು ಆಸ್ಪತ್ರೆ ಆಮ್ಲಜನಕ ಪೂರೈಕೆಯಾಗುತ್ತಿದ್ದ ಕೇಂದ್ರದಲ್ಲಿ ತಾಂತ್ರಿಕ ತೊಂದರೆ ಕಾಣಿಸಿದ್ದರಿಂದ ಆಮ್ಲಜನಕ ಕೊರತೆಯಾಗಿದೆ ಎಂದು ಸುದ್ದಿ ಹರಡಿದೆ’ ಎಂದು ಜಿಲ್ಲಾಧಿಕಾರಿ ಆರ್.ವೆಂಕಟೇಶಕುಮಾರ್ ಹೇಳಿದರು.
‘ಆಮ್ಲಜನಕ ಕೊರತೆ ಇದೆ ಎಂದು ಗೊತ್ತಾಗುತ್ತಿದ್ದಂತೆ 50 ಸಿಲಿಂಡರ್ ಕಳುಹಸಲಾಗಿದೆ. ಇದೀಗ ನವೋದಯ ಆಸ್ಪತ್ರೆಗೆ ಆಮ್ಲಜನಕ ಒದಗಿಸುತ್ತಿದ್ದ ಎಂಎಸ್ ಪಿಎಲ್ ಕಾರ್ಖಾನೆಯಲ್ಲೂ ತಾಂತ್ರಿಕ ಸಮಸ್ಯೆ ಪರಿಹಾರವಾಗಿದೆ’ ಎಂದರು.
‘ಜಿಲ್ಲೆಯಲ್ಲಿ ಖಾಸಗಿ ಆಸ್ಪತ್ರೆಗಳೂ ಸೇರಿದಂತೆ ಆಮ್ಲಜನಕದ ಬೇಡಿಕೆ ಮತ್ತು ಪೂರೈಕೆ ಬಗ್ಗೆ ಪ್ರತಿದಿನ ವರದಿ ಸಲ್ಲಿಸಲು ಅಧಿಕಾರಿಗಳ ತಂಡ ರಚಿಸಲಾಗಿದೆ. ಸ್ಥಳೀಯವಾಗಿ ಮೂರು ಫ್ಯಾಕ್ಟರಿಗಳಿಂದ ಆಮ್ಲಜನಕ ಪೂರೈಕೆ ಆಗುತ್ತಿದೆ. ಮುನ್ನಚ್ಚರಿಕೆ ವಹಿಸಿ ಬಳ್ಳಾರಿಯಿಂದ ಒಂದು ಆಮ್ಲಜನಕ ಟ್ಯಾಂಕರ್ ತರಿಸಿಕೊಳ್ಳಲಾಗಿದೆ. ಸದ್ಯಕ್ಕೆ ಆಮ್ಲಜನಕದ ಸಮಸ್ಯೆಯಿಲ್ಲ’ ಎಂದು ಹೇಳಿದರು.