ರಾಯಚೂರು: ಲಾಕ್ಡೌನ್ನಿಂದಾಗಿ ಸಂಕಷ್ಟದಲ್ಲಿರುವ ದೇವದಾಸಿ ವಿಮುಕ್ತ ಮಹಿಳೆಯರಿಗೆ ವಿಶೇಷ ಅನುದಾನ ಮಂಜೂರು ಮಾಡಬೇಕು. ಪುನರ್ ವಸತಿ ಸೌಲಭ್ಯ ಕಲ್ಪಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘ ಜಿಲ್ಲಾ ಸಮಿತಿಯ ಪದಾಧಿಕಾರಿಗಳು ಜಿಲ್ಲಾಧಿಕಾರಿ ಕಛೇರಿಯ ಮುಂದೆ ಮಂಗಳವಾರ ಪ್ರತಿಭಟನೆ ನಡೆಸಿದರು.
ಆ ನಂತರ ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಿದ ಅವರು, ಲಾಕ್ಡೌನ್ನಿಂದಾಗಿ ಮಾಜಿ ದೇವದಾಸಿ ಮಹಿಳೆಯರು ಸಂಕಷ್ಟದಲ್ಲಿದ್ದಾರೆ. ಅವರಿಗೆ ಕೂಡಲೇ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.
ರಾಯಚೂರು ತಾಲ್ಲೂಕಿನ ಸುಮಾರು 205 ಮಾಜಿ ದೇವದಾಸಿಯರಿಗೆ ಪುನರ್ ವಸತಿಗಾಗಿ 5 ಎಕರೆ ಭೂಮಿ ಮಂಜೂರು ಮಾಡಿ 4 ವರ್ಷಗಳಾದರೂ ಮನೆಗಳ ನಿರ್ಮಾಣ ಕಾರ್ಯ ಪ್ರಾರಂಭ ಮಾಡಿಲ್ಲ ಕೂಡಲೇ ಮನೆಗಳ ನಿರ್ಮಾಣ ಕಾರ್ಯ ಮಾಡಬೇಕು. 3 ತಿಂಗಳಿಂದ ಬಾಕಿ ಇರುವ ಸಹಾಯಧನ ಕೂಡಲೇ ಮಂಜೂರು ಮಾಡಬೇಕು ಎಂದು ಒತ್ತಾಯಿಸಿದರು.
ಸಂಘದ ಜಿಲ್ಲಾಧ್ಯಕ್ಷೆ ಎಚ್. ಪದ್ಮಾ, ಗೌರವ ಅಧ್ಯಕ್ಷ ಕೆ.ಜಿ. ವೀರೇಶ, ಅಯ್ಯಮ್ಮ, ಜೆ.ತಾಯಮ್ಮ, ತಿಮಲಮ್ಮ, ಜಂಗ್ಲೆಮ್ಮ ಇದ್ದರು.