ಕವಿತಾಳ: ಎರಡು ದಿನಗಳ ಹಿಂದೆ ಸುರಿದ ಅಕಾಲಿಕ ಮಳೆಗೆ ಮಸ್ಕಿ ತಾಲ್ಲೂಕಿನ ಜಂಗಮರಹಳ್ಳಿಯಿಂದ ಯದ್ದಲದಿನ್ನಿಗೆ ಸಂಪರ್ಕಿಸುವ ರಸ್ತೆಯಲ್ಲಿನ ಹಳ್ಳದ ಸೇತುವೆ ಕೊಚ್ಚಿ ಹೋಗಿದ್ದು ಗ್ರಾಮಸ್ಥರು ತೊಂದರೆ ಅನುಭವಿಸುವಂತಾಗಿದೆ.
ಈಗಾಗಲೇ ಬಿದ್ದು ಹೋಗಿದ್ದ ಸೇತುವೆಗೆ ಪೈಪ್ಗಳನ್ನು ಅಳವಡಿಸಿ ಮರಂ ಹಾಕಿ ತಾತ್ಕಾಲಿಕವಾಗಿ ದುರಸ್ತಿ ಮಾಡಲಾಗಿತ್ತು. ಧಾರಾಕಾರ ಮಳೆಗೆ ಮರಂ ಮತ್ತು ಪೈಪ್ ಗಳು ಕೊಚ್ಚಿ ಹೋಗಿ ರಸ್ತೆ ಸಂಪೂರ್ಣ ಹಾಳಾಗಿದೆ.
ರಸ್ತೆ ಸಂಪರ್ಕ ಕಡಿತವಾಗಿರುವುದರಿಂದ ಅಂದಾಜು 3 ಕಿ.ಮೀ. ಸುತ್ತುವರಿದು ಹಾಲಾಪುರ ಮೂಲಕ ತಿರುಗಾಡುವಂತಾಗಿದೆ ಎಂದು ಜಂಗಮರಹಳ್ಳಿ ಗ್ರಾಮದ ಮಹಾಂತೇಶ ತಿಳಿಸಿದರು.
ಈ ಭಾಗ ಸಂಪೂರ್ಣ ನೀರಾವರಿ ಪ್ರದೇಶವಾಗಿದ್ದು, ಭತ್ತ ಬೆಳೆದ ರೈತರು ಕಟಾವು ಮಾಡಲು ಮತ್ತು ಕಟಾವು ಮಾಡಿದ ಭತ್ತ ಸಾಗಿಸಲು ತೊಂದರೆ ಎದುರಿಸುವಂತಾಗಿದೆ. ಹೀಗಾಗಿ ಕೃಷಿ ಚಟುವಟಿಕೆಗಳಿಗೆ ಹಿನ್ನಡೆಯಾಗುತ್ತಿದೆ ಎಂದು ರೈತರು ಹೇಳಿದರು.
ಕೃಷಿ ಚಟುವಟಿಕೆಗಳಿಗೆ ತೊಂದರೆಯಾಗದಂತೆ ಸೇತುವೆಯನ್ನು ಶೀಘ್ರ ದುರಸ್ತಿ ಮಾಡಬೇಕು ಎಂದು ಗ್ರಾಮದ ವಾಸನಗೌಡ, ಶರಣಪ್ಪ ತಾತ, ದೊಡ್ಡನಗೌಡ, ಶೇಖರಪ್ಪ ಪಾಟೀಲ್, ವೆಂಕಣ್ಣ, ಬುಡ್ಡನಗೌಡ ಮತ್ತು ಬಿರೇಶ ಬಲ್ಲಟಗಿ ಒತ್ತಾಯಿಸಿದರು.