ರಾಯಚೂರು: ಆದರ್ಶ ಪುರುಷ ಶ್ರೀರಾಮ ನವಮಿಯನ್ನು ಸಂಭ್ರಮದಿಂದ ಶನಿವಾರ ವಿವಿಧೆಡೆ ಆಚರಿಸಲಾಯಿತು.
ಸ್ಟೇಷನ್ ರಸ್ತೆಯ ರಾಮಮಂದಿರದಲ್ಲಿ ಬೆಳಿಗ್ಗೆಯಿಂದಲೇ ಭಕ್ತರು ನೆರೆದಿದ್ದರು. ಅರವಿಂದ ಆಚಾರ್ಯ ಹಾಗೂ ಮಾರುತಿ ಆಚಾರ್ಯ ಅವರ ನೇತೃತ್ವದಲ್ಲಿ ಶ್ರೀರಾಮನ ಕಲ್ಯಾಣೋತ್ಸವ ನೆರವೇರಿಸಲಾಯಿತು. ವಿಶೇಷ ಪೂಜೆ, ಪುಷ್ಪಾಲಂಕಾರ ಸಲ್ಲಿಸಲಾಯಿತು.
ವಿವಿಧೆಡೆಯಿಂದ ಬಂದಿದ್ದ ಭಕ್ತರು ಅಲಂಕೃತ ಶ್ರೀರಾಮನ ದರ್ಶನ ಪಡೆದು ಪುನೀತರಾದರು. ಶ್ರೀರಾಮ, ಸೀತಾ, ಲಕ್ಷ್ಮಣ ಹಾಗೂ ಹನುಮಂತ ಇರುವ ಭಾವಚಿತ್ರವನ್ನಿಟ್ಟು ಅಲಂಕಾರ ಮಾಡಲಾಗಿತ್ತು. ನವಮಿ ನಿಮಿತ್ತ ಪಾನಕ ಹಾಗೂ ಕೋಸಂಬರಿ ವಿತರಿಸಲಾಯಿತು.
ನಿಜಲಿಂಗಪ್ಪ ಕಾಲೋನಿಯಲ್ಲಿರುವ ಕೋದಂಡರಾಮನ ದೇವಸ್ಥಾನದಲ್ಲೂ ವಿಶೇಷ ಪೂಜಾ ಕಾರ್ಯಕ್ರಮಗಳು ನೆರವೇರಿದವು.