ಲಿಂಗಸುಗೂರು: ಚುನಾಯಿತ ಪ್ರತಿನಿಧಿಗಳು, ಶಾಲಾ ಶಿಕ್ಷಣ ಇಲಾಖೆ ಅಧಿಕಾರಿಗಳು ಸೇರಿದಂತೆ ಆಡಳಿತ ವ್ಯವಸ್ಥೆಯ ತಾತ್ಸಾರ ಮನೋಭಾವಕ್ಕೆ ಒಳಗಾಗಿರುವ ವಸತಿ ನಿಲಯವೊಂದು ಸ್ಥಳೀಯ ಶಾಸಕರ ಮಾದರಿಯ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಹನ್ನೆರಡು ವರ್ಷಗಳಿಂದ ಮುಂದುವರಿದುಕೊಂಡು ಬಂದಿದೆ.
ನಿರ್ಗತಿಕರು, ಅನಾಥರು, ಶಾಲೆ ಬಿಟ್ಟ ಮಕ್ಕಳು, ದುಡಿಯಲು ಹೋಗಿರುವ ಕಾರ್ಮಿಕ ಮಕ್ಕಳು ಸೇರಿದಂತೆ ಸಂಕಷ್ಟದಲ್ಲಿರುವ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಪೂರಕ ಸೌಲಭ್ಯ ಕಲ್ಪಿಸಲು ಕರ್ನಾಟಕ ಕಸ್ತೂರಬಾ ಬಾಲಕಿಯರ ವಸತಿ ನಿಲಯ ಈಗಿನ ಮಸ್ಕಿ ತಾಲ್ಲೂಕಿನ ಗೋನವಾರಕ್ಕೆ ಹನ್ನೆರಡು ವರ್ಷಗಳ ಹಿಂದೆ 2010-11ರಲ್ಲಿ ಮಂಜೂರಾಗಿರುವುದನ್ನು ದಾಖಲೆಗಳು ದೃಢಪಡಿಸುತ್ತವೆ.
ಆದರೆ, ಆಗಲೇ ಇದು ಗೋನವಾರದಿಂದ ಕಸಬಾಲಿಂಗಸುಗೂರಿಗೆ ಸ್ಥಳಾಂತರಗೊಂಡಿತ್ತು. ಜಿಲ್ಲಾ ಪಂಚಾಯಿತಿ ಸದಸ್ಯೆ ದುರುಗಮ್ಮ ಗುಂಡಪ್ಪ ನಾಯಕ ಒತ್ತಡದಿಂದ ಸರ್ಜಾಪುರ ಗ್ರಾಮದ ಸರ್ಕಾರಿ ಪ್ರೌಢಶಾಲೆ ಆವರಣಕ್ಕೆ ಸ್ಥಳಾಂತರಗೊಂಡಿತ್ತು.
ಸರ್ಜಾಪುರದಲ್ಲಿ 2011-12ರಲ್ಲಿ ₹70 ಲಕ್ಷದಲ್ಲಿ ವಸತಿ ನಿಲಯ ಕಟ್ಟಡಕ್ಕೆ ಭೂಮಿ ಪೂಜೆ ನೆರವೇರಿಸಲಾಯಿತು. ಜಿಲ್ಲಾಡಳಿತ ನಿರ್ಮಿತಿ ಕೇಂದ್ರದ ಸುಪರ್ದಿಗೆ ಕಟ್ಟಡ ನಿರ್ಮಾಣದ ಹೊಣೆ ನೀಡಿತ್ತು. ಭ್ರಷ್ಟಾಚಾರದ ಆರೋಪದಡಿ ಮುಳುಗಿದ್ದ ನಿರ್ಮಿತಿ ಕೇಂದ್ರದ ಅಧಿಕಾರಿಗಳ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಾಗಿದ್ದರಿಂದ ಕಟ್ಟಡ ಕಾಮಗಾರಿ ಅಪೂರ್ಣ ಸ್ಥಿತಿಯಲ್ಲಿದೆ.
’ನಿರ್ಮಿತಿ ಕೇಂದ್ರದ ಭ್ರಷ್ಟಾಚಾರ ಪರಿಶೀಲನಾ ಸಮಿತಿಯು ತನಿಖೆ ನಡೆಸಿದ ಪಟ್ಟಿಗಳಲ್ಲಿ ಸರ್ಜಾಪುರ ಕಸ್ತೂರ ಬಾ ವಸತಿ ನಿಲಯ ಕಟ್ಟಡ ಕಳಪೆಯಿಂದ ಕೂಡಿದೆ. ವಸತಿ ನಿಲಯ ಕಟ್ಟಡ ನೆಲಸಮಗೊಳಿಸುವುದು ಸೂಕ್ತ ಎಂದು ವರದಿ ಸಲ್ಲಿಸಿರುವುದನ್ನು ಅಂದಿನ ಶಾಸಕ ಪ್ರತಾಪಗೌಡ ಪಾಟೀಲ ಸ್ಥಳಕ್ಕೆ ಭೇಟಿ ನೀಡಿದಾಗ ತಿಳಿದು ಬಂದಿತ್ತು’ ಎನ್ನುತ್ತಾರೆ ಗ್ರಾಮಸ್ಥರು.
ವಸತಿ ನಿಲಯ ಮಂಜೂರಿ, ಸ್ಥಳಾಂತರಗೊಂಡಿರುವುದು, ಕಟ್ಟಡದ ಅಪೂರ್ಣ ಸ್ಥಿತಿಗತಿ, ಮರು ಟೆಂಡರ್ ಅಥವಾ ಕಟ್ಟಡ ಪೂರ್ಣಗೊಳಿಸಲು ತೆಗೆದುಕೊಂಡಿರುವ ನಿರ್ಧಾರ ಕುರಿತು ಶಾಲಾ ಮುಖ್ಯಸ್ಥರು, ಶಾಲಾ ಶಿಕ್ಷಣ ಇಲಾಖೆ ಸಂಪರ್ಕಿಸಿದರೂ ಸಹ ಸ್ಪಷ್ಟ ಉತ್ತರಗಳು ಲಭ್ಯವಾಗುತ್ತಿಲ್ಲ.
ಕರ್ನಾಟಕ ಕಸ್ತೂರಬಾ ವಸತಿ ನಿಲಯವು ಶಾಸಕರ ಮಾದರಿ ಶಾಲಾ ಆವರಣದಲ್ಲಿ ಅಚ್ಚುಕಟ್ಟಾಗಿ ನಡೆದಿದೆ. ನೂರು ಮಕ್ಕಳಿಗೆ ತೊಂದರೆ ಆಗದಂತೆ ಮುನ್ನೆಚ್ಚರಿಕೆ ವಹಿಸುತ್ತ ಬಂದಿದ್ದೇವೆ. ಸ್ಥಳಾಂತರಕ್ಕೆ ಕಟ್ಟಡ ಕಾಮಗಾರಿ ಪೂರ್ಣಗೊಳ್ಳಬೇಕಿದೆ.ಹೊಂಬಣ್ಣ ರಾಠೋಡ. ಕ್ಷೇತ್ರ ಶಿಕ್ಷಣಾಧಿಕಾರಿ, ಲಿಂಗಸುಗೂರು
ಕಸ್ತೂರಬಾ ವಸತಿ ನಿಲಯ ಮಂಜೂರಾಗಿದ್ದು, ಸ್ಥಳಾಂತರಗೊಂಡ ಬಗ್ಗೆ ತಮಗೆ ಮಾಹಿತಿ ಇಲ್ಲ. ತಮ್ಮ ಆವರಣದಲ್ಲಿರುವ ವಸತಿ ನಿಲಯದ ಮಕ್ಕಳಿಗೆ ಪರಿಪೂರ್ಣ ಸೌಲಭ್ಯ ಕಲ್ಪಿಸಲಾಗಿದೆವಿಜಯಲಕ್ಷ್ಮಿ, ಮುಖ್ಯ ಶಿಕ್ಷಕಿ, ಶಾಸಕರ ಶಾಲೆ, ಲಿಂಗಸುಗೂರು
ವಸತಿ ನಿಲಯ ಮಂಜೂರಾತಿ ಇತರೆ ಮಾಹಿತಿ ಗೊತ್ತಿಲ್ಲ. ಈಗಿರುವ ವಸತಿ ನಿಲಯದಲ್ಲಿ ಎಲ್ಲ ಸೌಲಭ್ಯಗಳನ್ನು ಕಲ್ಪಿಸಿದ್ದಾರೆ. ಪಟ್ಟಣದಲ್ಲಿಯೇ ಶಾಲೆ ಕಲಿಯಲು ಅವಕಾಶ ಸಿಕ್ಕಂತಾಗಿದೆ. ವಸತಿ ನಿಲಯ ಸ್ಥಳಾಂತರಕ್ಕೆ ಮುಂದಾಗಬಾರದು.ಶಾಂತಾ ಪೂಜಾರಿ, ವಸತಿ ನಿಲಯದ ವಿದ್ಯಾರ್ಥಿನಿ, ಲಿಂಗಸುಗೂರು
ಕೋಟಿ ಖರ್ಚಾದರೂ ಪೂರ್ಣಗೊಳ್ಳದ ಕಟ್ಟಡ ವಸತಿ ನಿಲಯದ ಸ್ಥಳಾಂತರಕ್ಕೆ ಮಕ್ಕಳ ವಿರೋಧ ಅಡುಗೆದಾರರು, ಸಿಬ್ಬಂದಿಗೆ ಸಿಗದ ನಿಗದಿತ ವೇತನ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.