ರಾಯಚೂರು: ಲಾಕ್ಡೌನ್ನಿಂದಾಗಿ ಅಂಗವಿಕಲರು ತೀವ್ರ ಸಂಕಷ್ಟ ಅನುಭವಿಸುತ್ತಿದ್ದು, ಮಾಸಾಶನವನ್ನು ₹5ಸಾವಿರ ಹೆಚ್ಚಳ ಮಾಡಬೇಕು ಎಂದು ಒತ್ತಾಯಿಸಿ ರಾಜ್ಯ ಅಂಗವಿಕಲರ ಹಾಗೂ ಪಾಲಕರ ಒಕ್ಕೂಟ ಜಿಲ್ಲಾ ಸಮಿತಿಯ ಪದಾಧಿಕಾರಿಗಳು ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು.
ಆನಂತರ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಿದರು.
ಕೇಂದ್ರ ಸರ್ಕಾರ ಘೋಷಿಸಿದ ಮೂರು ತಿಂಗಳ ಮಾಶಾಸನದಲ್ಲಿ ಹೆಚ್ಚುವರಿಯಾಗಿ ₹1,000 ಸಹಾಯ ಘೋಷಿಸಿದರೂ ಫಲಾನುಭವಿಗಳಿಗೆ ತಲುಪಿಲ್ಲ. ಇಂದಿರಾಗಾಂಧಿ ರಾಷ್ಟ್ರೀಯ ಅಂಗವೈಕಲ್ಯ ಪಿಂಚಣಿ ಯೋಜನೆಯ ಶೇ 80 ರಷ್ಟು ವಿಕಲತೆ ಹೊಂದಿರಬೇಕು. ಅನೇಕರು ಶೇ 7.6 ಇದ್ದಾರೆ. ಅನೇಕರು ಅಸಂಘಟಿತ ವರ್ಗದಲ್ಲಿದ್ದು ಲಾಕ್ಡೌನ್ನಲ್ಲಿ ಕೆಲಸವಿಲ್ಲದೇ ಸಂಪಾದನೆ ಶೂನ್ಯವಾಗಿದೆ.
ಉಚಿತ ಪಡಿತರ ನೀಡಬೇಕು. ಉದ್ಯೋಗ ಖಾತ್ರಿ ಕೆಲಸದಲ್ಲಿ ಅಂಗವಿಕಲರನ್ನು ತೊಡಗಿಸಲು ವಿಶೇಷ ಗಮನ ನೀಡಬೇಕು. ನಗರಗಳಿಗೂ ವಿಸ್ತರಿಸಿ 200 ದಿನಗಳು ಕೆಲಸ ನೀಡಬೇಕು ಹಾಗೂ ವಿಕಲಚೇತನರಿಗೆ ನಿರುದ್ಯೋಗ ಭತ್ಯೆಯನ್ನು ನೀಡಬೇಕು ಎಂದು ಒತ್ತಾಯಿಸಿದರು.
ಸಂಘದ ಜಿಲ್ಲಾಧ್ಯಕ್ಷ ಹೊನ್ನಪ್ಪ, ಪದಾಧಿಕಾರಿ ಕರಿಯಪ್ಪ, ಕೃಷ್ಣ ಅಸ್ಕಿಹಾಳ್, ರಾಜು, ವೀನೊದ್, ಈರೇಶ್, ಸಂತೋಷಿಮಾ, ಅಬ್ದುಲ್ ಖಾಜ ಮೋಹಿನುದ್ದಿನ್ ಇದ್ದರು.