ಸಿಂಧನೂರು: ಕಳೆದ ಒಂದೂವರೆ ವರ್ಷಗಳ ಬಳಿಕ 1 ರಿಂದ 5ನೇ ತರಗತಿಗಳು ಆರಂಭವಾದ ಕಾರಣ ನಗರ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿರುವ ಸರ್ಕಾರಿ ಶಾಲೆಗಳಿಗೆ ಬಂದ ವಿದ್ಯಾರ್ಥಿಗಳಿಗೆ ಗುಲಾಬಿ ಹೂವು ನೀಡುವ ಮೂಲಕ ಶಿಕ್ಷಕರೆಲ್ಲರೂ ಪ್ರೀತಿಯಿಂದ ಸ್ವಾಗತಿಸಿದ್ದು, ವಿಶೇಷವಾಗಿತ್ತು.
ತಾಲ್ಲೂಕಿನ ಗೊರೇಬಾಳ, ಸಾಸಲಮರಿಕ್ಯಾಂಪ್, ಶಿವರಾಮನಗರ ಕ್ಯಾಂಪ್, ಕುರುಕುಂದಾ ಸೇರಿದಂತೆ ಎಲ್ಲ ಶಾಲೆಗಳು ಸೋಮವಾರ ಬೆಳಿಗ್ಗೆಯೇ ಮದುವಣಗಿತ್ತಿಯಂತೆ ತಳಿರು ತೋರಣ, ವಿಶೇಷ ರಂಗೋಲಿಯಿಂದ ಸಿಂಗಾರಗೊಂಡು ಮಕ್ಕಳನ್ನು ಸ್ವಾಗತಿಸಿಕೊಳ್ಳಲು ಅಣಿಯಾಗಿದ್ದವು.
ಶಾಲೆ ಪ್ರವೇಶಿಸಿದ ವಿದ್ಯಾರ್ಥಿಗಳಿಗೆ ಮುಖ್ಯಶಿಕ್ಷಕರು, ಸಹಶಿಕ್ಷಕರು, ಎಸ್ಡಿಎಂಸಿ ಸದಸ್ಯರೆಲ್ಲರೂ ಸಡಗರ ಸಂಭ್ರಮದಿಂದ ಗುಲಾಬಿ ಹೂವು ಮತ್ತು ಸಿಹಿ ನೀಡಿ ಸ್ವಾಗತಿಸಿಕೊಂಡರು. ಕೆಲ ಶಿಕ್ಷಕರು ಮಕ್ಕಳನ್ನು ಅಪ್ಪಿ ಮುದ್ದಾಡಿದ ಪ್ರೀತಿಯ ಕ್ಷಣಗಳು ಗುರು-ಶಿಷ್ಯರ ಸಂಬಂಧದ ಮಹತ್ವವನ್ನು ಸಾರಿದವು.
ನಂತರ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಸ್ಯಾನಿಟೈಸರ್ ಬಳಕೆ, ಅಂತರ ಪಾಲಿಸುವುದು, ಅನಾರೋಗ್ಯ ಲಕ್ಷಣಗಳಿದ್ದರೆ ತಿಳಿಸಬೇಕು ಎಂಬಿತ್ಯಾದಿ ಸಲಹೆಗಳನ್ನು ವಿದ್ಯಾರ್ಥಿಗಳಿಗೆ ಶಿಕ್ಷಕರು ನೀಡಿದರು.