ರಾಯಚೂರು: ಮಕ್ಕಳಲ್ಲಿ ವೈಜ್ಞಾನಿಕ ಚಿಂತನೆ ಬೆಳೆಸಲು ಇಂತಹ ವಿಜ್ಞಾನ ಹಬ್ಬಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದು ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷೆ ಮಂಗಳಾ ಹೆಗಡೆ ಹೇಳಿದರು.
ನಗರದ ಸರ್ಕಾರಿ ಬಾಲಮಂದಿರದಲ್ಲಿ ಬಾಲಭವನ ಸೊಸೈಟಿ, ಭಾರತ ಜ್ಞಾನ ವಿಜ್ಞಾನ ಸಮಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಾರ್ಯಾಲಯ ಹಾಗೂ ಮಕ್ಕಳ ರಕ್ಷಣಾ ಘಟಕದಿಂದ ಶುಕ್ರವಾರದಿಂದ ಏರ್ಪಡಿಸಿದ್ದಎರಡು ದಿನಗಳ ತಾಲ್ಲೂಕು ಮಟ್ಟದ ಮಕ್ಕಳ ವಿಜ್ಞಾನ ಹಬ್ಬವನ್ನು ಅವರು ಮಕ್ಕಳೆ ಸಿದ್ದಪಡಿಸಿದ ಪೇಪರ್ ಕಿರೀಟಗಳನ್ನು ಮಕ್ಕಳಿಗೆ ತೊಡಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ವಿಜ್ಞಾನ ಪ್ರಯೋಗಗಳು ಮತ್ತು ವಿಜ್ಞಾನ ಮಾದರಿಗಳನ್ನು ಪ್ರದರ್ಶಿಸಿ ಮಕ್ಕಳಲ್ಲಿ ಆಸಕ್ತಿ ಮೂಡಿಸಬೇಕು. ವಿದ್ಯಾರ್ಥಿ ದೆಸೆಯಲ್ಲಿಯೇ ವಿಜ್ಞಾನದತ್ತ ಒಲವು ಬೆಳೆಸಬೇಕು. ಜಾಗತಿಕ ತಾಪಮಾನದಿಂದ ಭೂಮಿಗೆ ಆಗುವ ಅನಾಹುತಗಳನ್ನು ಎಲ್ಲರೂ ಅರ್ಥಮಾಡಿಕೊಳ್ಳಬೇಕು. ಭೂಮಿಗೆ ಅಪಾಯ ತರುವಂತಹ ಕೆಲಸಗಳನ್ನು ಕೈ ಬಿಟ್ಟು ಭೂಮಿ ಮತ್ತು ವಾತಾವರಣದ ರಕ್ಷಣೆಗೆ ಮುಂದಾಗಬೇಕೆಂದು ತಿಳಿಸಿದರು.
ಮಕ್ಕಳ ಕಲ್ಯಾಣ ಸಮಿತಿ ಸದಸ್ಯ ಬಸವರಾಜ್ ಬ್ಯಾಗವಾಟ್ ಮಾತನಾಡಿ, ಸಮಾಜದಲ್ಲಿ ಅನೇಕ ಮೂಢನಂಬಿಕೆಗಳು ಇವೆ. ಅವುಗಳನ್ನು ಹೋಗಲಾಡಿಸಲು ಭಾರತ ಜ್ಞಾನ ವಿಜ್ಞಾನ ಸಮಿತಿ ಇಂತಹ ಮಕ್ಕಳ ವಿಜ್ಞಾನ ಹಬ್ಬವನ್ನು ಹಮ್ಮಿಕೊಳ್ಳುವ ಮುಖಾಂತರ ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವನೆ ಮತ್ತು ಚಿಂತನೆಯನ್ನು ಬೆಳೆಸಲು ಹೆಚ್ಚು ಸಹಕಾರಿ ಆಗುತ್ತದೆ. ಇಂತಹ ಮಕ್ಕಳ ವಿಜ್ಞಾನ ಹಬ್ಬಗಳಿಂದ ಅನೇಕ ಮಕ್ಕಳು ಚಟುವಟಿಕೆಗಳು ಮತ್ತು ವಿಜ್ಞಾನದಲ್ಲಿ ನಡೆದಿರುವಂತಹ ಹೊಸ ಆವಿಷ್ಕಾರಗಳ ಬಗ್ಗೆ ಮಕ್ಕಳು ತಿಳಿದುಕೊಂಡಾಗ ಮಕ್ಕಳಿಗೆ ವಿಜ್ಞಾನದ ಬಗ್ಗೆ ಆಸಕ್ತಿ ಮಾಡಲು ಸಹಕಾರಿಯಾಗುತ್ತದೆ ಎಂದು ಹೇಳಿದರು.
ರಾಯಚೂರು ತಾಲ್ಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿ ವೀರನಗೌಡ ಮತ್ತು ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ಗುರುಪ್ರಸಾದ್ ಮಾತನಾಡಿ, ಮಕ್ಕಳ ವಿಜ್ಞಾನ ಹಬ್ಬದಿಂದ ಮಕ್ಕಳ ಬೆಳವಣಿಗೆಗೆ ಸಹಕಾರಿಯಾಗುತ್ತದೆ. ಇಲಾಖೆಯ ಸಹಯೋಗದಲ್ಲಿ ನಡೆದಿರುವ ಈ ಮಕ್ಕಳ ಹಬ್ಬ ವೈಜ್ಞಾನಿಕ ವಿಷಯಗಳ ಕುರಿತು ಮಕ್ಕಳು ಮಾಹಿತಿ ಪಡೆದುಕೊಂಡು ಉತ್ತಮ ರೀತಿಯಲ್ಲಿ ಎರಡು ದಿನಗಳ ಹಬ್ಬ ನಡೆಯಲಿ ಎಂದು ತಿಳಿಸಿದರು.
ಭಾರತ ಜ್ಞಾನ ವಿಜ್ಞಾನ ಸಮಿತಿಯ ಉಪಾಧ್ಯಕ್ಷಸೈಯದ್ ಹಫಿಜುಲ್ಲಾ ಅವರು ವಿಜ್ಞಾನ ಹಬ್ಬದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿ, ಈ ಮಕ್ಕಳ ವಿಜ್ಞಾನ ಹಬ್ಬದಲ್ಲಿ ನಡೆಯುವ ಚಟುವಟಿಕೆಗಳ ಕುರಿತು ಮಾಹಿತಿ ನೀಡಿದರು.
ಮಕ್ಕಳ ಕಲ್ಯಾಣ ಸಮಿತಿ ಸದಸ್ಯ ಪ್ರಭುದೇವ ಪಾಟೀಲ, ಸಂಗಮೇಶ ಹಿರೇಮಠ ಇದ್ದರು. ರಾಯಚೂರು ತಾಲ್ಲೂಕಿನ ಸರ್ಕಾರಿ ಶಾಲೆಗಳ ಸಂಪನ್ಮೂಲ ವ್ಯಕ್ತಿಗಳು ಹಾಗೂ ಆಯ್ದ ಶಾಲೆಯ 150 ಮಕ್ಕಳು ಈ ಹಬ್ಬದಲ್ಲಿ ಭಾಗವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.