ರಾಯಚೂರು: ಅಯೋಧ್ಯೆಯ ರಾಮ ಮಂದಿರದಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ಪ್ರಯುಕ್ತ ಆಂಧ್ರಪ್ರದೇಶ ಕರ್ನೂಲ್ ಜಿಲ್ಲೆಯ ಮಂತ್ರಾಲಯದಲ್ಲಿ ಸೋಮವಾರ ಬೃಹತ್ ಶೋಭಾಯಾತ್ರೆ ನಡೆಯಿತು.
ಶ್ರೀರಾಘವೇಂದ್ರ ಸ್ವಾಮಿ ಮಠದ ವತಿಯಿಂದ ಆಯೋಜಿಸಿದ್ದ ಶೋಭಾ ಯಾತ್ರೆಗೆ ಪೀಠಾಧಿಪತಿ ಶ್ರೀಸುಬುಧೇಂದ್ರ ತೀರ್ಥರು ಧ್ವಜ ಹಾರಿಸುವ ಮೂಲಕ ಚಾಲನೆ ನೀಡಿದರು.
ಶ್ರೀಮಠದ ಯೋಗೀಂದ್ರ ಸಭಾಮಂಟಪದಿಂದ ಆರಂಭವಾದ ಯಾತ್ರೆ ಶ್ರೀಮಂಚಾಲಮ್ಮ ಸನ್ನಿಧಿ, ಪಂಚಮುಖಿ ದರ್ಶನ, ಶ್ರೀವೆಂಕಟೇಶ್ವರ ಸ್ವಾಮಿ, ರಾಮಲಿಂಗೇಶ್ವರ ಸ್ವಾಮಿ ದೇವಾಲಯ, ಸಂಸ್ಕೃತ ವಿದ್ಯಾಪೀಠ, ಸ್ಟೇಟ್ ಬ್ಯಾಂಕ್, ಸುಜಯೀಂದ್ರನಗರ, ನಾಗಲದಿನ್ನೆ ರಸ್ತೆ, ರಾಮಚಂದ್ರನಗರ, ಬಸ್ ನಿಲ್ದಾಣ, ರಾಘವೇಂದ್ರಪುರ, ಸುಶಮೀಂದ್ರ ಪಾರ್ಕ್, ರಾಘವೇಂದ್ರ ಸರ್ಕಲ್ ಮಾರ್ಗವಾಗಿ ಶ್ರೀಮಠದ ಮುಖ್ಯದ್ವಾರದಿಂದ ಶ್ರೀಮಠಕ್ಕೆ ಬಂದು ಸಮಾರೋಪಗೊಂಡಿತು.
ಮುಸ್ಲಿಂ ಮುಖಂಡರು ಸಹ ಶೋಭಾಯಾತ್ರೆಯಲ್ಲಿ ಪಾಲ್ಗೊಂಡು ರಾಮಧ್ವಜ ಹಿಡಿದು ಗಾಳಿಯಲ್ಲಿ ತೇಲಿಸಿದರು. ಜೈಶ್ರೀರಾಮ ಎಂದು ಬರೆಯಲಾದ ಕೇಸರಿ ಧ್ವಜಗಳನ್ನು ಹಿಡಿದ ಯುವಕರು ಹಾಗೂ ಭಕ್ತರು ಜಯಘೋಷ ಮೊಳಗಿಸಿದರು.