ಕವಿತಾಳ: ಬಸ್ ನಿಲ್ಲಿಸದ ಪರಿಣಾಮ ಮಸ್ಕಿ ತಾಲ್ಲೂಕಿನ ವಟಗಲ್ ಗ್ರಾಮದಲ್ಲಿ ವಿದ್ಯಾರ್ಥಿಗಳು ಮತ್ತು ನಿರ್ವಾಹಕನ ನಡುವೆ ವಾಗ್ವಾದ ನಡೆದು ಬಸ್ ತಡೆದು ನಿಲ್ಲಿಸಿದ ಘಟನೆ ಬುಧವಾರ ನಡೆಯಿತು.
‘ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಲಿಂಗಸೂಗೂರು ಪಟ್ಟಣದಿಂದ ಕವಿತಾಳಕ್ಕೆ ಬೆಳಿಗ್ಗೆ ಬಂದು ಹೋಗುತ್ತಿದ್ದ ಹೆಚ್ಚುವರಿ ಬಸ್ ಸಂಚಾರ ಸ್ಥಗಿತವಾದ ಹಿನ್ನೆಲೆಯಲ್ಲಿ ನಿತ್ಯ ಪರದಾಡುವಂತಾಗಿದೆ. ರಾಯಚೂರಿನಿಂದ ಬರುವ ಬಸ್ಗಳು ಪ್ರಯಾಣಿಕರಿಂದ ತುಂಬಿವೆ ಎಂದು ನಿಲ್ಲಿಸಲು ನಿರ್ವಾಹಕರು ನಿರಾಕರಿಸುತ್ತಿರುವ ಪರಿಣಾಮ ಸಮಯಕ್ಕೆ ಸರಿಯಾಗಿ ಶಾಲಾ ಕಾಲೇಜುಗಳಿಗೆ ಹೋಗಲು ಸಾಧ್ಯವಾಗುತ್ತಿಲ್ಲ’ ಎಂದು ವಿದ್ಯಾರ್ಥಿಗಳು ಆರೋಪಿಸಿದರು.
ವಿದ್ಯಾರ್ಥಿಗಳು ಮತ್ತು ನಿರ್ವಾಹಕ, ಚಾಲಕರ ನಡುವೆ ವಾಗ್ವಾದ ನಡೆದು ಒಂದು ಗಂಟೆ ಬಸ್ ತಡೆದ ಪರಿಣಾಮ ಪ್ರಯಾಣಿಕರು ತೊಂದರೆ ಅನುಭವಿಸುವಂತಾಯಿತು. ಸ್ಥಳಕ್ಕೆ ಆಗಮಿಸಿದ ಗ್ರಾಮಸ್ಥರು ನಿರ್ವಾಹಕನ ಮನವೊಲಿಸಿ ವಿದ್ಯಾರ್ಥಿಗಳನ್ನು ಬಸ್ನಲ್ಲಿ ಕಳುಹಿಸಿದರು.
‘ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಶಾಲಾ ಕಾಲೇಜು ಸಮಯಕ್ಕೆ ಸರಿಯಾಗಿ ಪ್ರತ್ಯೇಕ ಬಸ್ ಸಂಚಾರ ಆರಂಭಿಸಬೇಕು. ಬಸ್ ನಿಲುಗಡೆ ಮಾಡುವಂತೆ ನಿರ್ವಾಹಕರಿಗೆ ಸೂಚಿಸಬೇಕು’ ಎಂದು ಮುಖಂಡ ಶಿವಕುಮಾರ ಪಾಟೀಲ್ ಒತ್ತಾಯಿಸಿದರು.