ಲಿಂಗಸುಗೂರು: ಶ್ರಾವಣ ಮಾಸದ ಮೊದಲ ಹಬ್ಬ ಸಹೋದರ, ಸಹೋದರಿಯರು ಕೂಡಿ ಆಚರಿಸುವ ನಾಗಚತುರ್ಥಿ ಹಬ್ಬವನ್ನು ತಾಲ್ಲೂಕಿನಾದ್ಯಂತ ಸಂಭ್ರಮದಿಂದ ಆಚರಿಸಲಾಯಿತು.
ಗುರುವಾರ ದೇವಸ್ಥಾನ, ಜಮೀನುಗಳಲ್ಲಿನ ಹಾವಿನ ಹುತ್ತ, ನಾಗದೇವತೆಗಳ ಕಲ್ಲಿನ ಮೂರ್ತಿಗಳಿಗೆ ಮಹಿಳೆಯರು, ಮಕ್ಕಳು ತೆರಳಿ ಕೊಬ್ಬರಿ ಬಟ್ಟಲದಿಂದ ಹಾಲೆರೆದು ನೈವೇದ್ಯ ಸಲ್ಲಿಸುತ್ತಿರುವುದು ಕಂಡು ಬಂತು.
ಜನರು ಹೆಸರು, ಎಳ್ಳು, ಶೇಂಗಾ, ಸಜ್ಜೆ, ರವೆ ಸೇರಿದಂತೆ ವೈವಿಧ್ಯಮಯ ಉಂಡಿಗಳನ್ನು ಸಿದ್ಧಪಡಿಸಿಕೊಂಡು ಹರಳು (ಜೋಳ ಉರಿದು ಮಾಡಿದ), ನೂಲಿನ ದಾರ ಸಮೇತ ಪೂಜೆಗೆ ಆಗಮಿಸಿದ್ದರು.
ಪೂಜೆ ನೆರವೇರಿಸಿ ಮಕ್ಕಳಿಗೆ ಕುಟುಂಬಸ್ಥರಿಗೆ ನಾಗರ ದೋಷ ನಿವಾರಣೆ ಆಗಲಿ ಎಂದು ನೂಲಿನ ದಾರವನ್ನು ಕೈಗೆ, ಕೊರಳಿಗೆ ಕಟ್ಟಿ, ಕೊಬ್ಬರಿಗೆ ದಾರ ಹಾಕಿ ಮಕ್ಕಳಿಗೆ ಆಡಲು ನೀಡಿದ್ದು ವಿಶೇಷವಾಗಿತ್ತು.
ಮನೆಯ ಅಂಗಳದ ಗಿಡ–ಮರಗಳ ಟೊಂಗೆ, ಮನೆಯ ಆವರಣದ ಕಬ್ಬಿಣದ ಕೊಂಡಿಗಳಿಗೆ ಜೋಕಾಲಿ ಕಟ್ಟಿ ಹಾಡುಗಳನ್ನು ಹಾಡುತ್ತ ಕುಣಿದು ಕುಪ್ಪಳಿಸಿದರು. ಸಾಹಸ ಗ್ರಾಮೀಣ ಕ್ರೀಡೆಗಳಲ್ಲಿ ಯುವಕ, ಯುವತಿಯರು ಭಾಗವಹಿಸಿದ್ದರು.