ರಾಯಚೂರು: ರೈತರು ಅವೈಜ್ಞಾನಿಕ ಕೃಷಿ ಪದ್ದತಿಯನ್ನು ಅನುಸರಿಸುತ್ತಿರುವುದರಿಂದ ಮಣ್ಣಿನ ಫಲವತ್ತತೆ ನಶಿಸಿ ಹೋಗುತ್ತಿದೆ ಎಂದು ಜಿಲ್ಲಾ ಪಂಚಾಯತಿ ಉಪ ಕಾರ್ಯದರ್ಶಿ ಮೊಹ್ಮದ ಯುಸೂಫ್ ಹೇಳಿದರು.
ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಪ್ರೇಕ್ಷಾಗೃಹದಲ್ಲಿ ಜಿಲ್ಲಾ ಪಂಚಾಯಿತಿ, ಕೃಷಿ ಇಲಾಖೆ, ವಿಶ್ವಬ್ಯಾಂಕ್ ನೆರವಿನ ಸುಜಲ-3 ಯೋಜನೆಯಡಿ ಬುಧವಾರ ಏರ್ಪಡಿಸಿದ್ದ ‘ಭೂ ಸಂಪನ್ಮೂಲ ಮಾಹಿತಿ (ಎಲ್ಆರ್ಐ) ಪಾಲುದಾರರ ಹಾಗೂ ಜಿಲ್ಲಾ ಮಟ್ಟದ ರೈತರ ಕಾರ್ಯಾಗಾರ’ವನ್ನು ಉದ್ಘಾಟಿಸಿ ಮಾನಾಡಿದರು.
ಮಣ್ಣಿನ ಸತ್ವ ಹಾಗೂ ಜಲ ಈ ಎರಡೂ ಅಂಶಗಳಿಲ್ಲದಿದ್ದರೆ ರೈತರು ಏನು ಸಹ ಮಾಡದೆ ನಿಸ್ಸಾಹಯಕ ಸ್ಥಿತಿಯಲ್ಲಿ ಇರಬೇಕಾಗುತ್ತದೆ. ಇತ್ತೀಚಿನ ಕೃಷಿಯಲ್ಲಿ ಅತಿಯಾಗಿ ರಾಸಾಯನಿಕ ಬಳಸುತ್ತಿರುವುದರಿಂದ ಮಣ್ಣಿನ ಫಲವತ್ತತೆ ಹಾಗೂ ನೀರು ಕಲುಷಿತವಾಗತ್ತಿವೆ ಎಂದರು.
ರೈತ ಬಾಂಧವರಿಗೆ ಇಂಥ ಕಾರ್ಯಾಗಾರಗಳನ್ನು ಏರ್ಪಡಿಸುವ ಮೂಲಕ ಸರ್ಕಾರವು ಈ ಕುರಿತು ಜಾಗೃತಿ ಮೂಡಿಸುತ್ತಿದೆ. ಇದರ ಸದುಪಯೋಗವನ್ನು ರೈತರು ಸಮರ್ಪಕವಾಗಿ ಉಪಯೋಗಿಸಿಕೊಳ್ಳಬೇಕು ಎಂದು ತಿಳಿಸಿದರು.
40 ವರ್ಷಗಳ ಹಿಂದೆ ಕೆರೆಗೆ ನೀರು ಬತ್ತಿದಾಗ ಅಲ್ಲಿಯ ಫಲವತ್ತತೆಯ ಮಣ್ಣನ್ನು ಹೊಲಗಳಿಗೆ ಹಾಕುತ್ತಿದ್ದರು. ಈಗ ರೈತರು ರಾಸಾಯನಿಕತೆಗೆ ಮೋರೆ ಹೋಗಿರುವುದರಿಂದ ಹೊಲಗಳ ಫಲವತ್ತೆತೆ ನಶಿಸಿ ಹೋಗುತ್ತಿದೆ ಎಂದು ಹೇಳಿದರು.
ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ಡಾ.ಚೇತನಾ ಪಾಟೀಲ ಮಾತನಾಡಿ ‘ಸುಜಲ ಯೋಜನೆಯು ಎಲ್ಲಾ ರೈತರಿಗೆ ತಲುಪಬೇಕಾದರೆ ರೈತರು ತಾವಾಗಿ ಮುಂದೆ ಬಂದಾಗ ಎಲ್ಲರಿಗೂ ತಲುಪುತ್ತದೆ. ನರೇಗಾ ಯೋಜನೆ ಮೂಲಕವು ಇದನ್ನು ಕೊಡಲಾಗುತ್ತಿದೆ’ ಎಂದು ತಿಳಿಸಿದರು.
ಭೂ ಸಂಪನ್ಮೂಲ ಕಾರ್ಡ್ಗಳನ್ನು ರೈತ ಫಲಾನುಭವಿಗಳಿಗೆ ವಿತರಿಸಲಾಯಿತು.
ಜಿಲ್ಲೆಯ ವಿವಿಧ ತಾಲೂಕುಗಳಿಂದ ಆಗಮಿಸಿದ ರೈತರು, ಜನಪ್ರತಿನಿಧಿಗಳು ಹಾಗೂ ಕೃಷಿ ವಿಶ್ವವಿದ್ಯಾಲಯದ ಸಿಬ್ಬಂದಿ ಭಾಗವಹಿಸಿದ್ದರು.