ರಾಯಚೂರು: ಕೃಷ್ಣಾ ನದಿಯ ಪ್ರವಾಹದಿಂದ ತೊಂದರೆಗೆ ಸಿಲುಕಿದ ತಾಲ್ಲೂಕಿನ ಗುರ್ಜಾಪುರ ಗ್ರಾಮವನ್ನು ಸ್ಥಳಾಂತರ ಮಾಡಬೇಕು ಎಂದು ಒತ್ತಾಯಿಸಿ ಗ್ರಾಮಸ್ಥರು ಜಿಲ್ಲಾಧಿಕಾರಿಗೆ ಗುರುವಾರ ಮನವಿ ಸಲ್ಲಿಸಿದರು.
ಮಹಾರಾಷ್ಟ್ರ ಹಾಗೂ ಉತ್ತರ ಕರ್ನಾಟಕದ ಭಾಗದಲ್ಲಿ ಭಾರೀ ಮಳೆಯಾದಾಗ ಕೃಷ್ಣಾ ನದಿಯಲ್ಲಿ ಬರುವ ಪ್ರವಾಹದಿಂದ ಗ್ರಾಮ ಮುಳುಗಡೆಯಾಗಿ ಜನರು ತೊಂದರೆ ಅನುಭವಿಸುತ್ತಿದ್ದಾರೆ. ಈಚೆಗೆ ಉಂಟಾದ ಪ್ರವಾಹದಿಂದ 10 ದಿನಗಳ ಕಾಲ ಗ್ರಾಮಸ್ಥರನ್ನು 15 ಕಿ.ಮೀ. ದೂರದ ಜೇಗರಕಲ್ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಸ್ಥಾಪಿಸಿದ್ದ ಕಾಳಜಿ ಕೇಂದ್ರಕ್ಕೆ ಸ್ಥಳಾಂತರ ಮಾಡಲಾಗಿತ್ತು. ರೈತರು ಬೆಳೆದ ಬೆಳೆಗಳು ಪ್ರವಾಹಕ್ಕೆ ಕೊಚ್ಚಿಕೊಂಡು ಹೋಗಿವೆ ಎಂದು ತಿಳಿಸಿದರು.
ಸ್ಥಳಾಂತರ ಮಾಡಲು ತ್ವರಿತವಾಗಿ ಭೂಮಿ ಗುರುತಿಸಬೇಕು. ಭೂ ದಾನಿಗಳ ಮನವೊಲಿಸಿ ಪರಿಹಾರ ನೀಡಿ ಸ್ಥಳಾಂತರಕ್ಕೆ ಮುಂದಾಬೇಕು. 50 ಮನೆಗಳು ಮುಳುಗಡೆಯಾಗಿದ್ದು, 10 ಜನರಿಗೆ ಮಾತ್ರ ₹ 25 ಸಾವಿರ ಪರಿಹಾರ ನೀಡಲಾಗಿದೆ. ಪರಿಹಾರ ವಿತರಣೆಯಲ್ಲಿ ತಾರತಮ್ಯ ನಡೆದಿದ್ದು, ಸರಿಪಡಿಸಬೇಕು ಎಂದು ಒತ್ತಾಯಿಸಿದರು.