ರಾಯಚೂರು: ಯುವ ಮತದಾರರು ಸೇರಿದಂತೆ ನೌಕರರು ಹಾಗೂ ಪೊಲೀಸ್ ಕುಟುಂಬದವರು ಮತಗಟ್ಟೆಗೆ ಹೋಗಿ ಏಪ್ರಿಲ್ 23 ರಂದು ಮತ ಚಲಾಯಿಸಬೇಕು ಎಂದು ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್ ಎಸ್.ವಿ.ರಮೇಶ ಹೇಳಿದರು.
ನಗರದ ಪೊಲೀಸ್ ಕಲ್ಯಾಣ ಮಂಟಪದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಸ್ವೀಪ್ ಸಮಿತಿ, ಮತದಾರರ ಸಾಕ್ಷರತಾ ಕ್ಲಬ್ ಹಾಗೂ ಜಿಲ್ಲಾ ಪೊಲೀಸ್ ಇಲಾಖೆಯಿಂದ ಗುರುವಾರ ಆಯೋಜಿಸಿದ್ದ ಮತದಾನ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮತದಾನ ಪ್ರಮಾಣ ಹೆಚ್ಚಿಸಲು ಹಲವು ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲಾಗಿದ್ದು, ಅಭ್ಯರ್ಥಿಗಳ ಗೆಲುವಿಗೆ ಒಂದೊಂದು ಮತವು ಮುಖ್ಯವಾಗಿದೆ. ಒಳ್ಳೆಯವರನ್ನು ಆಯ್ಕೆ ಮಾಡುವ ಮೂಲಕ ಬದಲಾವಣೆ ಹಾಗೂ ಪ್ರಗತಿ ಸಾಧಿಸಲು ಸಾಧ್ಯವಾಗಲಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಶಸಸ್ತ್ರ ಮೀಸಲು ಪಡೆಯ ಪ್ರಭಾರಿ ಉಪಾಧೀಕ್ಷಕ ಕೇದಾರನಾಥ ಮಾತನಾಡಿ, ಪ್ರತಿಯೊಬ್ಬರೂ ತಪ್ಪದೇ ಮತ ಚಲಾಯಿಸಬೇಕು. ಯಾರೊಬ್ಬರೂ ಮತದಾನದಿಂದ ದೂರ ಉಳಿಯಬಾರದು ಎಂದು ಹೇಳಿದರು.
ಮತದಾನ ಪ್ರತಿಜ್ಞಾ ವಿಧಿ ಬೋಧಿಸಲಾಯಿತು. ದಂಡಪ್ಪ ಬಿರಾದಾರ ಮಾತನಾಡಿದರು. ಉಪನ್ಯಾಸಕಿ ಜಯಶ್ರೀ, ವಕೀಲ ದೊಡ್ಡಪ್ಪ ಇದ್ದರು. ಪಿಎಸ್ಐ ಅಮೋಘ ವಂದಿಸಿದರು. ವೈ.ಕೆ.ಯಶೋಧಾ ಕಾರ್ಯಕ್ರಮ ನಿರೂಪಿಸಿದರು.