ತುರ್ವಿಹಾಳ: ಸಂಪೂರ್ಣವಾಗಿ ನೀರಾವರಿ ಪ್ರದೇಶ ಹೊಂದಿರುವ ಹಸಿರಿನಿಂದ ಸಿಂಗರಿಸಿದಂತೆ ಕಾಣುವ ಸಿಂಧನೂರು ತಾಲ್ಲೂಕಿನ ತುರ್ವಿಹಾಳ ಪಟ್ಟಣದ ಸಮೀಪದ ಗ್ರಾಮ ಗುಂಜಳ್ಳಿಯಲ್ಲಿ ಶುದ್ಧ ಕುಡಿಯುವ ನೀರಿನ ಸಮಸ್ಯೆ ತಾರಕ್ಕೇರಿದೆ.
ಈ ಗ್ರಾಮದಲ್ಲಿಯೇ ಪಂಚಾಯಿತಿ ಕಾರ್ಯಾಲಯವಿದೆ. ಈ ಪಂಚಾಯಿತಿ ವ್ಯಾಪ್ತಿಯಲ್ಲಿ ಕೆ.ಹೊಸಳ್ಳಿ, 7 ಮೈಲ್ ಕ್ಯಾಂಪ್ನ ಎರಡು ಗ್ರಾಮಗಳು ಸೇರಿದಂತೆ ಸತ್ಯನಾರಾಯಣ ಕ್ಯಾಂಪ್, ಬನಹಟ್ಟಿಕ್ಯಾಂಪ್ ಇವೆ.
ಹತ್ತು ಸಾವಿರ ಜನಸಂಖ್ಯೆ ಇರುವ ಗುಂಜಳ್ಳಿ ಗ್ರಾಮದಲ್ಲಿ ಎಂಟು ಗ್ರಾಮ ಪಂಚಾಯಿತಿ ಸದಸ್ಯರಿದ್ದಾರೆ. ಈ ಗ್ರಾಮದ ಜನರಿಗೆ 5 ವರ್ಷಗಳಿಂದ ಕುಡಿಯಲು ಶುದ್ದವಾದ ನೀರಿನ ವ್ಯವಸ್ಥೆ ಇಲ್ಲದಂತಾಗಿದೆ ಎಂದು ಗ್ರಾಮಸ್ಥರು ಅಳಲನ್ನು ತೊಡಿಕೊಂಡಿದ್ದಾರೆ.
ತುರ್ವಿಹಾಳ ಪಟ್ಟಣ ಸಮೀಪ ಬಹುಗ್ರಾಮ ಶುದ್ಧ ಕುಡಿಯುವ ನೀರಿನ ಯೋಜನೆಯಡಿ ನಿರ್ಮಿಸಿರುವ ಕೆರೆಯ ವ್ಯಾಪ್ತಿಯಲ್ಲಿ ಗುಂಜಳ್ಳಿ ಗ್ರಾಮ ಪಂಚಾಯಿತಿ ಸೇರ್ಪಡೆಯಾಗಿದೆ. ಆದರೆ, ಸಮರ್ಪಕವಾಗಿ ಕುಡಿಯಲು ಶುದ್ಧ ನೀರು ಬರುತ್ತಿಲ್ಲ. ಅದಕ್ಕೆ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣವಾಗಿದೆ ಎಂದು ಜನ ಆರೋಪಿಸಿದ್ದಾರೆ.
ಗುಂಜಳ್ಳಿ ಗ್ರಾಮದಲ್ಲಿ ಒಂದು ಚಿಕ್ಕ ಕೆರೆ ಇದೆ. ಕಾಲುವೆಯ ನೀರಿನಿಂದ ಕೆರೆ ತುಂಬಿಸುತ್ತಾರೆ. ಕಲುಷಿತ ನೀರನ್ನು ಶುದ್ಧಿಕರಿದೇ ನೇರವಾಗಿ ನಲ್ಲಿಗಳಿಗೆ ಬಿಡುತ್ತಾರೆ. ಅನಿವಾರ್ಯವಾಗಿ ಹಲವು ಜನ ಇದೇ ನೀರು ಕುಡಿಯುತ್ತಾರೆ. ಹಲವರು ಸಮೀಪದ ತುರ್ವಿಹಾಳ ಪಟ್ಟಣ ಹಾಗೂ ತಿಡಿಗೋಳ ಗ್ರಾಮದಿಂದ ಕ್ಯಾನಿನಲ್ಲಿ ನೀರು ತುಂಬಿಸಿಕೊಂಡು ಬಂದು ಕುಡಿಯುವ ಪರಿಸ್ಥಿತಿಯಿದೆ ಎಂದು ಗ್ರಾಮದ ಕಟ್ಟೆಪ್ಪ ಹಂಚಿನಾಳ ಹೇಳಿದರು.
ಜನರಿಗೆ ಶುದ್ದ ಕುಡಿಯುವ ನೀರಿಗಾಗಿ ಸರ್ಕಾರ ಸಾಕಷ್ಟು ಅನುದಾನ ನೀಡುತ್ತಿದೆ. ಅದನ್ನು ಸರಿಯಾಗಿ ಬಳಸಿಕೊಂಡು ಗ್ರಾಮಕ್ಕೆ ಕೂಡಲೇ ಶುದ್ಧ ನೀರನ್ನು ಒದಗಿಸಬೇಕು
ವೀರೇಶ ಹೂಗಾರ ಗುಂಜಳ್ಳಿ ಗ್ರಾಮಸ್ಥ ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ತಾಲ್ಲೂಕ ಪ್ರಧಾನ ಕಾರ್ಯದರ್ಶಿ ಸಿಂಧನೂರು.
ಶುದ್ಧ ಕುಡಿಯುವ ನೀರಿನ ಕೊರತೆಯಿದೆ. ಬಸವಣ್ಣ ದೇವರ ಗುಡಿಯ ಹತ್ತಿರ ಸಿಹಿ ನೀರಿನ ಕೊಳವೆ ಬಾವಿಯಿದೆ. ಅದರ ಬಳಕೆಗಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅನುಮೋದನೆ ದೊರೆತರೆ ಅದರಿಂದ ಗ್ರಾಮಕ್ಕೆ ಶುದ್ದ ನೀರು ಪೂರೈಸಲಾಗುವುದು
ಪಂಪನಗೌಡ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಗುಂಜಳ್ಳಿ
ಗ್ರಾಮದ ಕುಡಿಯುವ ನೀರಿನ ಸಮಸ್ಯೆಯನ್ನು ಶಾಸಕರ ಗಮನಕ್ಕೆ ತಂದರೂ ಸ್ಪಂದನೆ ಇಲ್ಲದಂತಾಗಿದೆ
ಅಂಬಣ್ಣ ಭೋವಿ, ಅಧ್ಯಕ್ಷ ಗ್ರಾಮ ಪಂಚಾಯಿತಿ ಗುಂಜಳ್ಳಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.