ರಾಯಚೂರು: ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ (ನರೇಗಾ) ಯೋಜನೆಯ ಪರಿಣಾಮಕಾರಿ ಅನುಷ್ಠಾನದಿಂದ ಬರದ ಕಾರಣ ಊರು ತೊರೆಯಲು ಸಿದ್ಧರಾದ ಕೂಲಿಕಾರ್ಮಿಕರಿಗೆ ಒಂದಿಷ್ಟು ನೆರವಾದ ಯಶೋಗಾಥೆ ಇದು.
ತಾಲ್ಲೂಕಿನ ಆತ್ಕೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಡಿ.ರಾಂಪುರದ ಅಯ್ಯನ ಕೆರೆ ಅಭಿವೃದ್ಧಿ ಕಾಮಗಾರಿಯಲ್ಲಿ ಗ್ರಾಮದ 128 ಪುರುಷರು ಮತ್ತು 131 ಮಹಿಳೆಯರು ಒಟ್ಟು 259 ಕಾರ್ಮಿಕರು ದುಡಿದಿದ್ದಾರೆ.
ಸುಮಾರು ₹ 9 ಲಕ್ಷದಷ್ಟು ಬಿಲ್ ಆಗಿದೆ. ಐದು ಎಕೆರೆ ವಿಸ್ತೀರ್ಣದ ಈ ಕೆರೆ ಗ್ರಾಮದ ಜಮೀನುಗಳಿಗೆ ನೀರಿನ ಮೂಲ. ಮಳೆಗಾಲದಲ್ಲಿ ಮಾತ್ರ ನೀರು ಸಂಗ್ರಹವಾಗುತ್ತದೆ.
ಆದರೆ, ಈ ಕೆರೆಯಲ್ಲಿ ಸುಮಾರು ಐದು ಅಡಿ ಹೂಳುತುಂಬಿಕೊಂಡಿತ್ತು. ಇದನ್ನು ತೆಗೆಯಲು ನರೇಗಾ ಅಡಿ ಗ್ರಾಮ ಪಂಚಾಯಿತಿಯಿಂದ ಉದ್ಯೋಗ ನೀಡಲಾಯಿತು.
ಕೆರೆಯಲ್ಲಿ 10X10 ಅಳತೆಯ ನಾಲ್ಕು ಅಡಿ ಆಳದ ಸುಮಾರು 200 ಹೊಂಡಗಳನ್ನು ಮಾಡಿ ನೀರು ಶೇಖರಣೆಗೆ ಹೆಚ್ಚಿನ ಅವಕಾಶ ಕಲ್ಪಿಸಲಾಗಿದೆ.
ಇದರಿಂದ ಸುತ್ತಮುತ್ತಲಿನ ಕೊಳವೆ ಬಾವಿಗಳಿಗೂ ಜಲಮರುಪೂರ್ಣಕ್ಕೆ ಅನುಕೂಲವಾಗಲಿದೆ.
‘ಗ್ರಾಕೂಸ್ ಕೂಲಿ ಕಾರ್ಮಿಕರ ಸಂಘಟನೆ ಅಲ್ಲಿ ನೋಂದಣಿಯಾದ ಕಾರ್ಮಿಕರು ಕೆಲಸ ಕೇಳಿಕೊಂಡು ಬರುತ್ತಿದ್ದರು. ಆದರೆ, ಡಿ.ರಾಂಪುರದಲ್ಲಿ ವೈಯಕ್ತಿಕ ಕಾಮಗಾರಿಗಳಿಗೆ ಹೆಚ್ಚಿನ ಅವಕಾಶ ಇರಲಿಲ್ಲ.
ಹಾಗಾಗಿ ಸಮುದಾಯ ಆಧಾರಿತ ಕಾಮಗಾರಿಗಳನ್ನು ಕೈಗೆತ್ತಿಕೊಂಡು ಕೆಲಸ ನೀಡಬೇಕಾಯಿತು. ಈ ನಿಟ್ಟಿನಲ್ಲಿ ಕೆರೆ ಅಭಿವೃದ್ಧಿ ಕಾರ್ಯವನ್ನು ಕೈಗೆತ್ತಿಕೊಳ್ಳಲಾಯಿತು’ ಎಂದು ತಾಲ್ಲೂಕು ಪಂಚಾಯಿತಿಯ ಪ್ರಭಾರಿ ಕಾರ್ಯನಿರ್ವಾಹಕ ಅಧಿಕಾರಿ ರಮೇಶ ತಿಳಿಸಿದರು.
‘ಬೇರೆ ಊರುಗಳಿಗೆ ಹೋಗಿದ್ದರೆ ಕೆಲಸವೇನೋ ಸಿಗುತ್ತಿತ್ತು ಆದರೆ, ಅರ್ಧದಷ್ಟು ಹಣ ಊಟ, ವಸತಿಗೆಂದೇ ಖರ್ಚಾಗುತ್ತಿತ್ತು ಏನೂ ಉಳಿಯುತ್ತಿರಲಿಲ್ಲ. ಆದರೆ, ನಮ್ಮೂರಿನಲ್ಲೆ ಕೆಲಸ ಸಿಕ್ಕಿದ್ದು ಅನುಕೂಲವಾಯಿತು’ ಎಂದು ಕೂಲಿ ಕಾರ್ಮಿಕ ನಾಗರಾಜ ಹೇಳಿದರು.