ದೇವದುರ್ಗ: ತಾಲ್ಲೂಕಿನಿಂದ 8 ಕಿ.ಮೀ ದೂರವಿರುವ ಕರಿಗುಡ್ಡ ಗ್ರಾಮ ಪಂಚಾಯಿತಿ ವ್ಯಾಪ್ತಿ ಹಲವು ಹಳ್ಳಿಗಳಿಗೆ ಬಸ್ ಸಂಚಾರ ಇಲ್ಲವೇ ಇಲ್ಲ. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹೋರಾಟ ನಡೆಸಿದ ಕೀರ್ತಿ ಇದೆ. ಕರಿಗುಡ್ಡ, ಮನಗೋಳಿ – ಎಲೆ ಬಿಚ್ಚಾಲಿ ರಾಜ್ಯ ಹೆದ್ದಾರಿಯಲ್ಲಿಯೇ ಇದೆ. ಕರಿಗುಡ್ಡ ಗ್ರಾ.ಪಂ ಕೇಂದ್ರ ಸ್ಥಳ. ಈ ಗ್ರಾಮ ಹೊರತುಪಡಿಸಿ ದೊಡ್ಡಿ, ತಾಂಡಾಗಳು ದಟ್ಟ ಅರಣ್ಯ ಪ್ರದೇಶ ಮಧ್ಯದಲ್ಲಿಯೇ ಇವೆ.
ನಾಯಕ ಜನಾಂಗಕ್ಕೆ ಸೇರಿದ ರಾಜರು ಆಳ್ವಿಕೆ ಮಾಡಿರುವ ಬಗ್ಗೆ ಕುರುಹು ಇಲ್ಲಿವೆ. ಗುಡ್ಡಗಾಡಿನ ಮಧ್ಯ ಇರುವ ಜೇಜರದೊಡ್ಡಿ, ಸೀಮೆರದೊಡ್ಡಿ, ಬುಡ್ಡರಾಯ ದೊಡ್ಡಿ, ಕುಣಿಕೇರ ದೊಡ್ಡಿ, ಬಂಡೇರ ದೊಡ್ಡಿ, ಗುಂಡೇರ ದೊಡ್ಡಿ, ಬಸಲಿಂಗಯ್ಯನ ದೊಡ್ಡಿ, ವೆಂಗಳಾಪುರ ತಾಂಡಾ, ಬೂಜನಾಯ್ಕಕ ತಾಂಡಾ, ಸೋಮಲಾಪುರ ತಾಂಡಾಗಳಿಗೆ ಅಗತ್ಯ ಸೌಲಭ್ಯವಿಲ್ಲದೇ ಸೋರಗುತ್ತಿವೆ.
ಗುಡ್ಡಗಾಡು ಪ್ರದೇಶಗಳಲ್ಲಿ ಜನರು ಉಪಜೀವನಕ್ಕಾಗಿ ಕೃಷಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಮಕ್ಕಳಿಗೆ ಶಿಕ್ಷಣವೂ ಇಲ್ಲ. ಶಿಕ್ಷಕರು ಇವರಿಗೆ ಶಿಕ್ಷಣ ನೀಡುವುದಕ್ಕೆ ಶ್ರಮಿಸುತ್ತಿದ್ದಾರೆ. ಪಾಲಕರಿಗೂ ಮಕ್ಕಳಿಗೆ ಶಿಕ್ಷಣ ನೀಡುವ ಬಗ್ಗೆ ಜಾಗೃತಿಯೇ ಇಲ್ಲ.
ಕುರಿಗುಡ್ಡ ಬಿಟ್ಟರೇ ಉಳಿದ ಗ್ರಾಮಗಳಿಗೆ ನೀರು, ರಸ್ತೆ, ವಿದ್ಯುತ್, ಮಹಿಳಾ ಶೌಚಾಲಯ ಕನಸಿನ ಮಾತು. ಅಂತರ್ಜಲ ಕುಸಿದಿದೆ ಎಂದು ನೆಪ ಹೇಳುವ ಅಧಿಕಾರಿಗಳು ಜನರಿಗೆ ಯಾವುದೇ ರೀತಿಯ ಕುಡಿವ ನೀರಿನ ಸೌಲಭ್ಯ ಕಲ್ಪಿಸಿಲ್ಲ. ಸರಿಯಾದ ರಸ್ತೆ ಇಲ್ಲವೇ ಇಲ್ಲ. ಸರ್ಕಾರದಿಂದ ಬರುವ ಅನುದಾನ ಸದ್ಬಳಕೆಯಾಗದೇ ಅವ್ಯವಸ್ಥೆ ರೂಪದಲ್ಲಿ ಹರಿಯುತ್ತಿದೆ. ಕಾಯಿಲೆಗಳು ಬಂದರೇ ಇಲ್ಲಿನ ಜನರು ಚಿಕಿತ್ಸೆಗೆ ದೇವದುರ್ಗಕ್ಕೆ ಬರಬೇಕು. ಸಕಾಲಕ್ಕೆ ಆರೋಗ್ಯ ಸೇವೆ ಸಿಗದೇ ಸಾವು ಉಂಟಾದ ನಿದರ್ಶನಗಳು ಇವೆ. ಶೌಚಾಲಯ ವ್ಯವಸ್ಥೆ ದಿಕ್ಕು ತಪ್ಪಿದೇ. ಸರಿಯಾದ ಚರಂಡಿ ವ್ಯಸವ್ಥೆ ಇಲ್ಲದೇ ಕೊಳಚೆ ರಸ್ತೆ ಮೇಲೆ ಹರಿಯುತ್ತದೆ.
ಗ್ರಾಪಂಗೆ ಲಕ್ಷಗಟ್ಟಲೇ ಅನುದಾನ ಬರುತ್ತದೇ. ಆದರೆ, ದೊಡ್ಡಿ, ತಾಂಡಾಗಳಲ್ಲಿ ಸೌಲಭ್ಯ ಮರೀಚಿಕೆ. ಚುನಾವಣೆ ಬಂದಾಗ ಹತ್ತಾರೂ ಆಶ್ವಾಸನೆ ನೀಡಿ ಹೋಗುವ ಜನಪ್ರತಿನಿಧಿಗಳು ಗೆದ್ದ ನಂತರ ಈ ಕಡೆಗೆ ಮುಖ ಕೂಡಾ ಮಾಡುವುದಿಲ್ಲ ಎಂದು ಗ್ರಾಮದ ಶಿವಪ್ಪ ಎಂಬುವರು ಆಕ್ರೋಶ ವ್ಯಕ್ತಪಡಿಸುತ್ತಾರೆ.
‘ಸೌಕರ್ಯ ನೀಡಿ’
ಹತ್ತಾರ ವರ್ಷಗಳಿಂದ ದೊಡ್ಡಿಗಳಲ್ಲಿ ವಾಸಿಸುತ್ತಿರುವ ನಿವಾಸಗಳಿಗೆ ಅಗತ್ಯ ಮೂಲ ಸೌಕರ್ಯಗಳು ಇಲ್ಲ. ಇಲ್ಲಿನ ಜನರಿಗೆ ರಸ್ತೆ, ಕುಡಿವ ನೀರು ಮತ್ತು ಆಸ್ಪತ್ರೆ ತುರ್ತಾಗಿ ಬೇಕಾಗಿದೆ. ಆದರೆ, ಯಾರು ಗಮನ ಹರಿಸುತ್ತಿಲ್ಲ.
– ರಂಗಪ್ಪ ಜೇಜರದೊಡ್ಡಿ ,ಹಳೇ ವೆಂಗಳಾಪುರ
‘ನೀರಿನ ಸಮಸ್ಯೆ ಹೇರಳ’
ಕರಿಗುಡ್ಡ ಗ್ರಾಪಂ ವ್ಯಾಪ್ತಿಯ ಎಲ್ಲ ದೊಡ್ಡಿ ಮತ್ತು ತಾಂಡಾಗಳ ಜನರಿಗೆ ಕುಡಿವ ನೀರಿನ ಸಮಸ್ಯೆ ಇದೆ. ಗುಡ್ಡ, ಗಾಡು ಪ್ರದೇಶವಾಗಿರುವದರಿಂದ ಅಂತರ್ಜಲ ಕೊರತೆಯಿಂದಾಗಿ ಕೊಳವೆ ಬಾವಿ ಉಪಯೋಗ ಇಲ್ಲದಂತಾಗಿದೆ.
ಖಾಜಾಪಾಶಾ, ಪಿಡಿಒ ಕರಿಗುಡ್ಡ‘
‘ರಸ್ತೆಯೇ ಇಲ್ಲ’
ಇಲ್ಲಿನ ದೊಡ್ಡಿ, ತಾಂಡಾಗಳ ಮಕ್ಕಳಿಗೆ ಅಕ್ಷರ ಜ್ಞಾನ ನೀಡುವುದು ಶಿಕ್ಷಕರ ದೊಡ್ಡ ಸಾಹಸದ ಕೆಲಸ. ಇಂದಿಗೂ ದೊಡ್ಡಿ, ತಾಂಡಾಗಳಿಗೆ ರಸ್ತೆಯೇ ಇಲ್ಲ. ಪ್ರತಿನಿತ್ಯ ಶಾಲೆಗೆ ಹೋಗಿ, ಬರುವುದೇ ದೊಡ್ಡ ಕಷ್ಟವಾಗಿದೆ.
ಸುರೇಶ ಕಟ್ಟಿಮನಿ, ಮುಖ್ಯ ಶಿಕ್ಷಕ ಗುಂಡೇರದೊಡ್ಡಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.