ರಾಯಚೂರು: ಸೌಂದರ್ಯ ಪ್ರಜ್ಞೆ ಅತಿಯಾದರೆ ದೇಹಕ್ಕೆ ಹಾನಿಯುಂಟಾಗುತ್ತದೆ. ವೈದ್ಯರ ಸಲಹೆ ಇಲ್ಲದೆ ಸೌಂದರ್ಯ ವರ್ಧಕಗಳನ್ನು ಬಳಸುವುದು ಕ್ಷೇಮವಲ್ಲ ಎಂದು ಭಾರತೀಯ ಕುಟುಂಬ ಯೋಜನಾ ಸಂಘದ (ಎಫ್ಪಿಎಐ) ಜಿಲ್ಲಾ ಘಟಕದ ಅಧ್ಯಕ್ಷ ಡಾ.ವಿ.ಎ.ಮಾಲಿಪಾಟೀಲ್ ಹೇಳಿದರು.
ಎಫ್ಪಿಎಐ ವತಿಯಿಂದ ನಗರದ ಅಂಬೇಡ್ಕರ್ ನಗರದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಮೆಹೆಂದಿ, ಬ್ಯೂಟಿಷಿಯನ್ ಮತ್ತು ಹೊಲಿಗೆ ತರಬೇತಿ ಹಾಗೂ ಆರೋಗ್ಯ ತಪಾಸಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಬ್ಯೂಟಿಪಾರ್ಲರ್ಗಳಲ್ಲಿಯೂ ಹೆಚ್ಚು ರಾಸಾಯನಿಕ ಅಂಶವಿರುವ ಸೌಂದರ್ಯ ವರ್ಧಕಗಳನ್ನು ಬಳಸಬಾರದು. ನೈಸರ್ಗಿಕವಾದ ವಸ್ತುಗಳನ್ನು ಬಳಸಬೇಕು ಎಂದು ಸಲಹೆ ನೀಡಿದರು.
ಎಫ್ಪಿಎಐ ಗೌರವ ಕಾರ್ಯದರ್ಶಿ ಕೆ.ಅಲಿಯಾ ಖಾನಂ ಮಾತನಾಡಿ, ಅಂಬೇಡ್ಕರ್ ನಗರ, ಜ್ಯೋತಿ ಕಾಲೊನಿ ಕೊಳೆಗೇರಿಗಳ ನಿವಾಸಿಗಳು ಬಟ್ಟೆ ಹೊಲಿಸಿಕೊಳ್ಳಲು, ಮೆಹೆಂದಿ ಮತ್ತು ಬ್ಯೂಟಿಪಾರ್ಲರ್ಗಳಿಗಾಗಿ ನೂರಾರು ರೂಪಾಯಿ ವ್ಯಯ ಮಾಡುತ್ತಾರೆ. ಇಲ್ಲಿನ ಮಹಿಳೆಯರಿಗೆ ಈ ಕುರಿತು ತರಬೇತಿ ನೀಡಿದರೆ ಅವರ ಜೀವನೋಪಾಯಕ್ಕೆ ಒಂದು ದಾರಿಯಾಗುತ್ತದೆ ಎಂಬ ಉದ್ದೇಶದಿಂದ ಈ ಕಾರ್ಯಾಗಾರ ನಡೆಸುತ್ತಿರುವುದಾಗಿ ಹೇಳಿದರು.
‘ನಿರುದ್ಯೋಗ ಸಮಸ್ಯೆ: ಮಹಿಳಾ ಸಬಲೀಕರಣ’ ಕುರಿತು ಲಲಿತಾ ಎಂ. ಸತ್ಯಕುಮಾರ ಮತ್ತು ‘ಮಹಿಳೆಯರ ಆರೋಗ್ಯ ಹಾಗೂ ಬ್ಯೂಟಿಪಾರ್ಲರ್’ ಬಗ್ಗೆ ವಿಜಯಲಕ್ಷ್ಮಿ ಮಾತನಾಡಿದರು.
ಈ ಸಂದರ್ಭದಲ್ಲಿ 65ಕ್ಕೂ ಹೆಚ್ಚು ಮಹಿಳೆಯರ ಆರೋಗ್ಯ ತಪಾಸಣೆ ಮಾಡಲಾಯಿತು. ಡಾ.ಅನುರಾಧಾ, ಪ್ರಸನ್ನ ವೆಂಕಟೇಶ, ಜಗನ್ನಾಥ, ಖಾಜಾ ಹುಸೇನ್ ಶಂಕುತಲಾ, ಭೀಮರಾಯ, ವಾಗೀಶ, ವೇಣುಗೋಪಾಲ ಭಾಗವಹಿಸಿದ್ದರು.