ರಾಯಚೂರು: ಸಮಾನ ಕೆಲಸಕ್ಕೆ ಸಮಾನ ವೇತನ, ಸಮಾನ ವೇತನ ಶ್ರೇಣಿ ಮತ್ತು ಸೇವಾ ನಿಯಮ, ವಿಶ್ವವಿದ್ಯಾಲಯಗಳ ವ್ಯವಸ್ಥಾಪನಾ ಮಂಡಳಿಗಳಲ್ಲಿ ಶಿಕ್ಷಕೇತರ ನೌಕರರಿಗೆ ಪ್ರಾತಿನಿಧ್ಯ ನೀಡಬೇಕು ಮತ್ತು ವಿಶ್ವವಿದ್ಯಾಲಯದ ಆಡಳಿತವನ್ನು ಪ್ರಜಾ ತಾಂತ್ರೀಕರಣಗೊಳಿಸಬೇಕು ಎಂಬ ಪ್ರಮುಖ ನಿರ್ಣಯಗಳನ್ನು ಭಾನುವಾರ ನಡೆದ ಅಖಿಲ ಭಾರತ ವಿಶ್ವವಿದ್ಯಾಲಯಗಳ ಶಿಕ್ಷಕೇತರ ನೌಕರರ ಮಹಾಒಕ್ಕೂಟದ ರಾಷ್ಟ್ರೀಯ ಕಾರ್ಯಕಾರಿ ಸಭೆಯಲ್ಲಿ ಕೈಗೊಳ್ಳಲಾಯಿತು.
ವಿಶ್ವವಿದ್ಯಾಲಯಗಳ ಧನಸಹಾಯ ಆಯೋಗವು ಶಿಕ್ಷಕರಿಗೆ, ಎ ಮತ್ತು ಬಿ ಶ್ರೇಣಿ ಶಿಕ್ಷಕೇತರ ನೌಕರರಿಗೆ ದೇಶದ್ಯಾಂತ ಸಮಾನ ವೇತನ ಶ್ರೇಣಿ ಹಾಗೂ ಸಮಾನ ಸೇವಾ ನಿಯಮಗಳನ್ನು ಜಾರಿಗೊಳಿಸಿದೆ. ವಿಶ್ವವಿದ್ಯಾಲಯದಲ್ಲಿ ಕೆಲಸ ಮಾಡುವ ಸಿ ಮತ್ತು ಡಿ ಶ್ರೇಣಿಯ ನೌಕರರು ಕೂಡ ಸಮಾನ ವೇತನ ಶ್ರೇಣಿ ಹಾಗೂ ವೇತನ ಶ್ರೇಣಿಗಳನ್ನು ಜಾರಿಗೊಳಿಸುವಂತೆ ಒತ್ತಾಯಿಸಿ ದೇಶಾದ್ಯಂತ ಹೋರಾಟಗಳನ್ನು ನಡೆಸಿದ್ದಾರೆ. ಈ ವರ್ಗದ ನೌಕರರ ಬಗ್ಗೆ ಸರ್ಕಾರ ಮಲತಾಯಿ ಧೋರಣೆ ತಾಳಿದೆ.
ವಿಶ್ವವಿದ್ಯಾಲಯಗಳಂತ ಉನ್ನತ ಶಿಕ್ಷಣದ ಸಂಸ್ಥೆಗಳಲ್ಲಿ ಈ ತರಹದ ತಾರತಮ್ಯ ನಡೆಸುತ್ತಿದೆ. ಆದ್ದರಿಂದ ಸಿ ಮತ್ತು ಡಿ ವೃಂದದ ನೌಕರರ ಸಮಾನ ಮತ್ತು ಸಮಾನ ಸೇವಾ ನಿಯಮಗಳನ್ನು ನೀಡುವಂತೆ ಸಭೆ ನಿರ್ಣಯ ಕೈಗೊಂಡಿತು.
ದೇಶದ ವಿಶ್ವವಿದ್ಯಾಲಯಗಳಲ್ಲಿ ಲಕ್ಷ ಲಕ್ಷ ಸಂಖ್ಯೆಯಲ್ಲಿ ದಿನಗೂಲಿ, ಗುತ್ತಿಗೆ ಆದಾರದ ನೌಕರರು ದುಡಿಯುತ್ತಿದ್ದಾರೆ. ಇವರಿಗೆ ಸಮಾನ ಕೆಲಸಕ್ಕೆ ಸಮಾನ ವೇತನವನ್ನು ಕೊಡಬೇಕೆಂದು ಒಕ್ಕೂಟವು ಹೋರಾಡುತ್ತಾ ಬಂದಿದೆ. ಸುಪ್ರೀಂಕೋರ್ಟ್ ಕೂಡ ಸಮಾನ ಕೆಲಸಕ್ಕೆ ಸಮಾನ ವೇತನವನ್ನು ಕೊಡಬೇಕು ಎಂದು ತೀರ್ಪು ನೀಡಿದೆ.
ಹಾಗಾಗಿ ವಿಶ್ವವಿದ್ಯಾಲಯಗಳಲ್ಲಿ ಕೆಲಸ ಮಾಡುತ್ತಿರುವ ಇಂತಹ ನೌಕರರಿಗೆ ಕಾಯಂ ನೌಕರರಿಗೆ ನೀಡುವ ವೇತನವನ್ನು ನೀಡಬೇಕು ಎಂದು ಸಭೆಯಲ್ಲಿ ಅಂಗೀಕರಿಸಲಾಯಿತು. ವಿಶ್ವವಿದ್ಯಾಲಯಗಳಲ್ಲಿ ಪ್ರಜಾ ತಾಂತ್ರೀಕ ವ್ಯವಸ್ಥೆ ಕುಸಿದುಬಿದ್ದಿದೆ. ಪ್ರತಿಯೊಂದು ಹಂತದಲ್ಲಿಯೂ ಸರ್ಕಾರ ಮಧ್ಯ ಪ್ರವೇಶಿಸುತ್ತಿದೆ.
ಇದನ್ನು ಸರಿಪಡಿಸಲು ವಿಶ್ವವಿದ್ಯಾಲಯದ ಆಡಳಿತವನ್ನು ಪ್ರಜಾ ತಾಂತ್ರೀಕರಣಗೊಳಿಸಬೇಕು ಮತ್ತು ವಿಶ್ವವಿದ್ಯಾಲಯಗಳಲ್ಲಿ ನಿರ್ಣಯ ತೆಗೆದುಕೊಳ್ಳುವಂತಹ ಸಂರಚನೆಗಳಲ್ಲಿ ಸಮಾಜದ ಎಲ್ಲಾ ವರ್ಗಗಳಲ್ಲಿ ಪ್ರಾತಿನಿಧ್ಯ ನೀಡಬೇಕು ಎಂಬ ನಿರ್ಣಯಕ್ಕೆ ಸಭೆ ಒಪ್ಪಿಗೆ ನೀಡಿತು.
ದೊಡ್ಡಮುಖ ಬೆಲೆಯ ನೋಟು ರದ್ದತಿಯಿಂದ ಸಂಕಷ್ಟಕ್ಕೆ ಸಿಲುಕಿದ ಕೃಷಿಕರು, ಕೃಷಿ ಕೂಲಿಕಾರರು, ಕಾರ್ಮಿಕರು ಸಣ್ಣ ವ್ಯಾಪಾರಿಗಳಿಗೆ ಪರಿಹಾರ ನೀಡಬೇಕು. ಹಣ ತೆಗೆಯಲು ಎಟಿಎಂ ಮತ್ತು ಬ್ಯಾಂಕ್ಗಳ ಮುಂದೆ ಸಾಲಿನಲ್ಲಿ ನಿಂತು ಸಾವೀಗೀಡಾದವರ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು ಎಂದು ಸಭೆ ಒತ್ತಾಯಿಸಿತು.
ಬ್ಯಾಂಕಿಂಗ್ ವಹಿವಾಟು ಸುಧಾರಣೆ ಹೆಸರಿನಲ್ಲಿ ಖಾತೆದಾರರ ಮೇಲೆ ಹೆಚ್ಚಿನ ಹೊರೆ ಹಾಕಲಾಗುತ್ತಿದೆ. ಈ ಜನವಿರೋಧಿ ನೀತಿ ಹಿಂಪಡೆಯಬೇಕು ಎಂದು ಆಗ್ರಹಿಸಲಾಯಿತು.
ಪುನರ್ ಆಯ್ಕೆ
ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ಶಿಕ್ಷಕೇತರ ನೌಕರರ ಒಕ್ಕೂಟದ ಅಧ್ಯಕ್ಷರಾಗಿ ಶಂಕರ್ ಪುನರ್ ಆಯ್ಕೆಯಾದರು. ಶ್ರೀಕಾಂತ್ ಪ್ರಧಾನ ಕಾರ್ಯದರ್ಶಿಯಾಗಿ, ಆರ್.ಎಸ್. ಹೊಸಮಠರ ಖಜಾಂಜಿಯ ನ್ನಾಗಿಯೂ ಬೆಂಗಳೂರು ವಿಶ್ವವಿದ್ಯಾಲಯದ ಶಿಕ್ಷಕೇತರ ನೌಕರರ ಸಂಘದ ಅಧ್ಯಕ್ಷ ಮತ್ತು ಪ್ರಧಾನ ಕಾರ್ಯದರ್ಶಿಯನ್ನು ರಾಜ್ಯ ಒಕ್ಕೂಟದ ಗೌರವಾಧ್ಯ ಮತ್ತು ಮೈಸೂರು ವಿಶ್ವವಿದ್ಯಾನಿಲ ಯದ ಶಿಕ್ಷಕೇತರ ನೌಕರರ ಸಂಘದ ಅಧ್ಯಕ್ಷರನ್ನು ಕಾರ್ಯಧ್ಯ ಕ್ಷರನ್ನಾಗಿ ಚುನಾಯಿಸಲಾಯಿತು.