ರಾಯಚೂರು: ದೇಶದಲ್ಲಿ ಇತ್ತೀಚಿನ ದಿನಗಳಲ್ಲಿ ಜಾತಿ ತಾರತಮ್ಯ ಹೆಚ್ಚಾಗುತ್ತಿದ್ದು, ಇದರಿಂದ ಸಮಾಜದಲ್ಲಿ ಅಸಮಾನತೆ ನಿರ್ಮಾಣವಾಗಿದೆ ಎಂದು ಕೃಷಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಜಗಜೀವನರಾಂ ಕಳವಳ ವ್ಯಕ್ತಪಡಿಸಿದರು.
ನಗರದ ಟಾಗೋರ್ ಸ್ಮಾರಕ ಕಾಲೇಜಿನ ಸಭಾಂಗಣದಲ್ಲಿ ಸೂರ್ಯೋದಯ ವಾಕಿಂಗ್ ಕ್ಲಬ್ನಿಂದ ಡಾ.ಅಂಬೇಡ್ಕರ ಜಯಂತಿ ಅಂಗವಾಗಿ ಭಾನುವಾರ ಆಯೋಜಿಸಿದ್ದ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.
ಜಾತಿ ವ್ಯವಸ್ಥೆಯ ಸಮಸ್ಯೆ ಮನಗಂಡಿದ್ದ ಡಾ.ಅಂಬೇಡ್ಕರ ಅವರು ಜಾತಿ ವ್ಯವಸ್ಥೆ ನಿರ್ಮೂಲನೆ ಮಾಡಲು ಶ್ರಮಪಟ್ಟಿದ್ದರು. ಆದರೆ, ಜಾತಿ ವ್ಯವಸ್ಥೆ ನಿರ್ಮೂಲನೆ ಆಗದಂತೆ ರಾಜಕೀಯ ಶಕ್ತಿಗಳು ನೋಡಿಕೊಳ್ಳುತ್ತಿವೆ ಎಂದರು.
ರಾಜಕೀಯದಲ್ಲಿ ಸಮಾನತೆ ಸಾಧ್ಯವಾಗಿದೆ. ಆದರೆ, ಆರ್ಥಿಕ, ಸಾಮಾಜಿಕ ಸಮಾನತೆ ಸಾಧ್ಯವಾಗಿಲ್ಲ. ಪ್ರಜಾಪ್ರಭುತ್ವ ಗಟ್ಟಿಗೊಳಿಸಲು ಎಲ್ಲರೂ ಸಮಾನತೆ ಸಾಧಿಸಲು ಪ್ರಯತ್ನಿಸಬೇಕು ಎಂದರು.
ಟಿಯುಸಿಐ ರಾಜ್ಯ ಘಟಕ ಅಧ್ಯಕ್ಷ ಆರ್.ಮಾನಸಯ್ಯ ಅವರು ಸಮಾನತೆಯ ಪ್ರತಿಪಾದಕ ಅಂಬೇಡ್ಕರ್ ಅವರ ಚಿಂತನೆಯ ಪ್ರಸ್ತುತತೆ ಕುರಿತು ಉಪನ್ಯಾಸ ನೀಡಿ, ಅಂಬೇಡ್ಕರ್ ಅವರಂತಹ ಮಹಾನ್ ಪುರುಷರು ಹಾಕಿಕೊಟ್ಟ ಮಾರ್ಗದಲ್ಲಿ ಸಾಗುವ ಮೂಲಕ ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೆ ಶ್ರಮಿಸಬೇಕಿದೆ ಎಂದು ಹೇಳಿದರು.
ದೇಶದಲ್ಲಿನ ಜಾತಿ ವ್ಯವಸ್ಥೆಯ ಬಗ್ಗೆ ಶರಣರು, ಸಂತರು ಹಾಗೂ ಮಹಾನ್ ಪುರುಷರು ಹೋರಾಟ ಮಾಡಿದ್ದಾರೆ. ಆದರೆ, ಇಂದಿಗೂ ದೇಶದಿಂದ ಜಾತಿ ವ್ಯವಸ್ಥೆ ತೊಲಗಿಸಲು ಸಾಧ್ಯವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ರಿಮ್ಸ್ ಆಸ್ಪತ್ರೆಯ ಮಾನಸಿಕ ವಿಭಾಗದ ಮುಖ್ಯಸ್ಥ ಡಾ.ರಮೇಶ ಬಾಬು ಮಾತನಾಡಿದರು.
ನಿಸ್ವಾರ್ಥದಿಂದ ಮಾಡಿದ ಕೆಲಸ ಶಾಶ್ವತವಾಗಿ ಉಳಿಯುತ್ತದೆ. ಹಾಗಾಗಿ ಅಂಬೇಡ್ಕರ ಅವರು ನಿಸ್ವಾರ್ಥದಿಂದ ಮಾಡಿದ ಕೆಲಸಗಳು ಇಂದಿಗೂ ಉಳಿದಿವೆ ಎಂದರು.
ಸೂರ್ಯೋದಯ ವಾಕಿಂಗ್ ಕ್ಲಬ್ ಅಧ್ಯಕ್ಷ ಬಿ.ಬಸವರಾಜ ಅಧ್ಯಕ್ಷತೆ ವಹಿಸಿದ್ದರು. ಪದಾಧಿಕಾರಿಗಳಾದ ಡಾ.ರಿಯಾ ಜುದ್ದೀನ್, ಮೌನೇಶ ಗೋನಾ ಳ, ಸತ್ಯನಾರಾಯಣ ಇತರರು ಇದ್ದರು. ವೆಂಕಟೇಶ ಬೇವಿನಬೆಂಚಿ ಪ್ರಾಸ್ತಾವಿಕ ಮಾತನಾಡಿದರು.