ಮಾಗಡಿ: ‘ಕೇವಲ ತೋರ್ಪಡಿಕೆಗೆ ಅಂಬೇಡ್ಕರ್ ಜಯಂತಿ ಆಚರಿಸುವುದು ಬೇಡ’ ಎಂದು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಜಿಲ್ಲಾ ಜಾಗೃತ ಮತ್ತು ಉಸ್ತುವಾರಿ ಸಮಿತಿ ಸದಸ್ಯ ದೊಡ್ಡಯ್ಯ ಹೇಳಿದರು.
ಪಟ್ಟಣದ ಬಾಬು ಜಗಜೀವನ ರಾಂ ನಗರದಲ್ಲಿ ಬುಧವಾರ ನಡೆದ ‘ಮಹಾನಾಯಕ’ ನಾಮಫಲಕ ಅನಾವರಣ ಮತ್ತು ಅಂಬೇಡ್ಕರ್ ಜಯಂತಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಮನುವಾದಿಗಳು ದೇಶದ ಮೂಲನಿವಾಸಿಗಳಿಗೆ ಅಸ್ಪೃಶ್ಯತೆಯ ಪಟ್ಟ ಕಟ್ಟಿದರು. ಜಾತೀಯತೆ ಬೆಳೆಸಿದರು. ಶೋಷಿತ ಸಮುದಾಯದ ಯುವಜನರು ಅಂಬೇಡ್ಕರ್, ಬಾಬು ಜಗಜೀವನ ರಾಂ ಸಾವಿತ್ರಿಬಾಯಿ ಫುಲೆ, ಪೆರಿಯಾರ್, ರಾಮ ಮನೋಹರ ಲೋಹಿಯಾ, ದೇವರಾಜು ಅರಸು ಅವರ ಜೀವನಚರಿತ್ರೆ ಓದಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಪುರಸಭೆ ಮುಖ್ಯಾಧಿಕಾರಿ ಮಹೇಶ್ ಮಾತನಾಡಿ, ದೀನರ ಬಾಳಲ್ಲಿ ಬೆಳಕು ನೀಡಿದವರು ಅಂಬೇಡ್ಕರ್. ಪೂಜೆಗಿಂದ ತತ್ವದ ಆಚರಣೆ ಮುಖ್ಯ ಎಂದರು.
ಜೆ.ಜೆ. ನಗರದ ಮುಖಂಡ ಗೋಪಾಲಕೃಷ್ಣ ಮಾತನಾಡಿ, ಬಡವರು, ಶೋಷಿತರಿಗೆ ಸಹಾಯ ಮಾಡುವ ಮೂಲಕ ಅಂಬೇಡ್ಕರ್ ಹೆಸರನ್ನು ಶಾಶ್ವತಗೊಳಿಸಬೇಕು ಎಂದು ಹೇಳಿದರು.
ಮುಖಂಡ ಶ್ರೀನಿವಾಸ್ ಮಾತನಾಡಿ, ಅಂಬೇಡ್ಕರ್ ಅವರನ್ನು ಎಲ್ಲಾ ಸಮುದಾಯದ ಮನ, ಮನೆಗಳಿಗೆ ತಲುಪಿಸುವ ಕೆಲಸ ಮಾಡಬೇಕಿದೆ ಎಂದರು.
ಮನೋಜ್, ಚಂದ್ರಶೇಖರ, ರಾಜೇಶ್, ಸಾಗರ್, ಸಂಜಯ್, ಮಂಜುನಾಥ, ಶ್ರೀನಿವಾಸ್ ಹಾಗೂ ಜೆ.ಜೆ. ನಗರದ ನಿವಾಸಿಗಳು ಇದ್ದರು.