ರಾಮನಗರ: ಬೆಂಗಳೂರು- ಮೈಸೂರು ನೂತನ ಹೆದ್ದಾರಿಯಲ್ಲಿ ಆರು ಪ್ರಮುಖ ನಗರಗಳಿಗೆ ಪ್ರವೇಶ ಮತ್ತು ನಿರ್ಗಮನ ಟೋಲ್ ಗಳನ್ನು ನಿರ್ಮಿಸುವ ವ್ಯವಸ್ಥೆ ಸದ್ಯದಲ್ಲೇ ಆಗಲಿದೆ ಎಂದು ರಾಮನಗರ ಜಿಲ್ಲಾ ಉಸ್ತುವಾರಿ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ ಹೇಳಿದರು.
ಇಲ್ಲಿನ ಕೆಂಪೇಗೌಡನದೊಡ್ಡಿ ಬಳಿ ಹೆದ್ದಾರಿ ಕಾಮಗಾರಿ ಪರಿಶೀಲನೆ ಸಂದರ್ಭ ಪತ್ರಕರ್ತರ ಜೊತೆ ಮಾತನಾಡಿದರು.
ಬೆಂಗಳೂರಿನಿಂದ ಬಂಟಾಳ್ವವರೆಗೆ ಒಟ್ಟು 370 ಕಿ.ಮೀ.ಗೂ ಹೆಚ್ಚು ಉದ್ಧದ ಹೆದ್ದಾರಿಯನ್ನು ಸಮಗ್ರವಾಗಿ ಅಭಿವೃದ್ಧಿ ಮಾಡಲಾಗುವುದು. ಮಂಗಳೂರು ವಿಮಾನ ನಿಲ್ದಾಣಕ್ಕೆ ಪರ್ಯಾಯವಾಗಿ ಈ ರಸ್ತೆ ಬೆಳೆಯಲಿದೆ ಎಂದರು.
ಹೆದ್ದಾರಿಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಹೆಸರಿಡಲು ನಮ್ಮ ಸಹಮತ ಇದೆ. ಕಾವೇರಿ ಹೆಸರಿಟ್ಟರೂ ಸರಿಯೇ. ಎರಡೂ ನಮ್ಮ ಕಣ್ಣಿದಂತೆ ಎಂದರು.
ವಿಧಾನಸೌಧದಲ್ಲಿ ಹತ್ತು ಲಕ್ಷ ರೂಪಾಯಿ ಸಿಕ್ಕಿರುವ ಬಗ್ಗೆ ಮಾಹಿತಿ ಇಲ್ಲ. ಈ ಬಗ್ಗೆ ತನಿಖೆ ಆಗಲಿದೆ ಎಂದರು.
ಸ್ಯಾಂಟ್ರೊ ರವಿ ಜೊತೆ ಬಿಜೆಪಿ ಸಂಪರ್ಕದ ಕುರಿತು ಪ್ರತಿಕ್ರಿಯೆಗೆ ಅವರು ನಿರಾಕರಿಸಿದರು.
ಸಿದ್ದರಾಮಯ್ಯ ನಿಜವಾದ ಪಪ್ಪಿ
'ಸಿದ್ದರಾಮಯ್ಯ ಅವರೇ ನಿಜವಾದ ಪಪ್ಪಿ' ಎಂದು ಅಶ್ವತ್ಥನಾರಾಯಣ ಲೇವಡಿ ಮಾಡಿದರು.
ಆತ್ಮಸಾಕ್ಷಿ ಇರುವ ಯಾರೇ ಆದರೂ ಒಂದು ಕ್ಷಣ ಕಾಂಗ್ರೆಸ್ ನಲ್ಲಿ ಇರುವುದಿಲ್ಲ. ವಂಶಪಾರಂಪರ್ಯ ರಾಜಕಾರಣ ಇರುವ ಪಕ್ಷ ಕಾಂಗ್ರೆಸ್. ಇವರಿಗೆ ಆತ್ಮಸಾಕ್ಷಿ ಇದ್ದರೆ ಕೂಡಲೇ ಕಾಂಗ್ರೆಸ್ ಗೆ ರಾಜೀನಾಮೆ ನೀಡಬೇಕು ಎಂದರು.
ಸಚಿವ ಕೆ. ಗೋಪಾಲಯ್ಯ ಮಾತನಾಡಿ, ಸಿದ್ದರಾಮಯ್ಯ ಅವರಿಗೆ ಬುದ್ಧಿ ಭ್ರಮಣೆ ಆಗಿದೆ. ಅವರು ರಾಜಕೀಯ ನಿವೃತ್ತಿ ಪಡೆಯುವುದು ಒಳಿತು ಎಂದು ಸಲಹೆ ನೀಡಿದರು.