ಕನಕಪುರ: ದಾಳಿಂಬ ಗ್ರಾಮದಲ್ಲಿ ಬಸವ ತತ್ವ ಸಾರಲು ಸ್ಥಾಪನೆ ಮಾಡಿರುವ ಬಸವ ಮಂಟಪ ದಕ್ಷಿಣ ಕರ್ನಾಟಕದಲ್ಲಿ ಕೂಡಲ ಸಂಗಮವಾಗಿ ಪ್ರಖ್ಯಾತಿ ಹೊಂದಲಿದೆ ಎಂದು ಬೆಂಗಳೂರು ಬಸವಗಂಗೋತ್ರಿ ಚನ್ನಬಸವೇಶ್ವರ ಜ್ಞಾನಪೀಠದ ಪೀಠಾಧೀಶ ಜಗದ್ಗುರು ಡಾ.ಚನ್ನಬಸವಾನಂದ ಸ್ವಾಮೀಜಿ ಹೇಳಿದರು.
ತಾಲ್ಲೂಕಿನ ಸಾತನೂರು ಹೋಬಳಿ ದಾಳಿಂಬ ಗ್ರಾಮದಲ್ಲಿ ಗುರುಬಸವೇಶ್ವರ ಪ್ರಾರ್ಥನಾ ಮಂದಿರದ ಉದ್ಘಾಟನೆ ಹಾಗೂ ಬಸವೇಶ್ವರಸ್ವಾಮಿ ಮೂರ್ತಿ ಪ್ರತಿಷ್ಠಾಪನ ಸಮಾರಂಭದಲ್ಲಿ ಮಾತನಾಡಿದರು.
ಉತ್ತರ ಕರ್ನಾಟಕದಲ್ಲಿರುವ ಅನುಭವ ಮಂಟಪ ನಾಡಿನಾದ್ಯಂತ ಬಸವತತ್ವ ಸಾರುತ್ತಿದೆ. ಅದೇ ರೀತಿ ಈ ಬಸವ ಮಂಟಪ, ರಾಮನಗರ, ಮೈಸೂರು, ಮಂಡ್ಯ, ಬೆಂಗಳೂರು ಜಿಲ್ಲೆ ಸೇರಿದಂತೆ ದಕ್ಷಿಣ ಕರ್ನಾಟಕದಲ್ಲಿ ಬಸವ ತತ್ವ ಪಸರಿಸಲು ಅನುಕೂಲವಾಗಲಿದೆ ಎಂದು ಹೇಳಿದರು.
ಮುಂದಿನ ದಿನಗಳಲ್ಲಿ ಈ ಗ್ರಾಮದ ಸುತ್ತಮುತ್ತಲ ಗ್ರಾಮಗಳಿಗೆ ಆಧ್ಯಾತ್ಮಿಕ ಕೇಂದ್ರವಾಗಿ ಪರಿವರ್ತನೆಗೊಳ್ಳುತ್ತದೆ. ಯಾವುದೇ ಜಾತಿ ಧರ್ಮದ ಉದ್ದೇಶವಿಲ್ಲದೆ ಬಸವ ಮಂಟಪವನ್ನು ಸ್ಥಾಪನೆ ಮಾಡಲಾಗಿದೆ ಎಂದರು.
ಇಲ್ಲಿ ವಾರಕ್ಕೊಮ್ಮೆ ಪ್ರಾರ್ಥನೆ, ಪ್ರವಚನಗಳು ಜರುಗಲಿವೆ. ಮನುಷ್ಯನಾದವನು ಸಂಸ್ಕಾರವನ್ನು ರೂಢಿಸಿಕೊಳ್ಳಬೇಕು. ಸರ್ವಜ್ಞರ ವಚನದಂತೆ ಕೊಟ್ಟಿದ್ದು ತನಗೆ, ಬಚ್ಚಿಟ್ಟಿದ್ದು ಪರರಿಗೆ, ಎನ್ನುವ ಸರ್ವಜ್ಞರ ನಾಡ್ನುಡಿಯಂತೆ ಮನುಷ್ಯ ಪರೋಪಕಾರಿ ಆಗಬೇಕು ಎಂದರು.
ಮರಳವಾಡಿ ಬಸವ ಗುರುಕುಲ ಪೀಠಾಧ್ಯಕ್ಷ ಮೃತ್ಯುಂಜಯ ಸ್ವಾಮೀಜಿ ಮಾತನಾಡಿ, ಮನುಷ್ಯ ತಾನು ಮಾಡುವ ಕಾಯಕವನ್ನು ಭಕ್ತಿಯಿಂದ, ಶ್ರದ್ಧೆಯಿಂದ ಮಾಡಿದರೆ ಅದರಿಂದ ಕೈಲಾಸವನ್ನು ಕಾಣಬಹುದು ಎಂದು ಹೇಳಿದರು.
ಬಸವ ಮಂಟಪ ನಿರ್ಮಾಣಕ್ಕೆ ಭೂದಾನ ಮಾಡಿದ ದಾಸೋಹಿ ಶರಣರ ರಾಮಣ್ಣನವರ 11ನೇ ವರ್ಷದ ಲಿಂಗೈಕ್ಯ ಸ್ಮರಣೆ ಕಾರ್ಯವು ಶರಣರಿಂದ ನಡೆಯುತ್ತಿದೆ. ಅದಕ್ಕೆ ಕಾರಣ ಅವರು ಮಾಡಿರುವ ದಾನ ಧರ್ಮ ಹಾಗೂ ಭೂದಾನವಾಗಿದೆ. ಈ ಬಸವ ಮಂಟಪ ಸ್ಥಾಪನೆಯಾಗಲು ಅವರ ಆಧ್ಯಾತ್ಮಿಕ ಕಾರ್ಯ ಕಾರಣವಾಗಿದೆ. ಈ ಬಸವ ಮಂಟಪ ಮುಂದಿನ ದಿನಗಳಲ್ಲಿ ಒಂದು ಆಧ್ಯಾತ್ಮಿಕ ಶಕ್ತಿ ಕೇಂದ್ರ ವಾಗಲಿ ಎಂದು ಆಶಿಸಿದರು.
ಬಸವಣ್ಣನ ತತ್ವಗಳ ಪ್ರವಚನ, ವಿಶೇಷ ಪೂಜೆ, ವಚನ, ಗಾಯನ, ಬಸವ ಗೀತೆ ಗಾಯನವನ್ನು ಏರ್ಪಡಿಸಲಾಗಿತ್ತು. ತಾಲ್ಲೂಕು ಬಸವ ಸಮಿತಿ ಅಧ್ಯಕ್ಷ ನಿರಂಜನಮೂರ್ತಿ ಅಮ್ಮುಗೆ ರಾಮನ ಹಡದ ಅಪ್ಪಣ್ಣ ವಚನವನ್ನು ಪಠಿಸಿದರು.
ಚಿಕ್ಕಮಗಳೂರು ವಿಶ್ವ ಧರ್ಮಪೀಠ ಬಸವನಂದ ಸ್ವಾಮೀಜಿ, ನಿಜಗುಣ ಸ್ವಾಮೀಜಿ, ಚಳ್ಳಕೆರೆ ಹಡದಪ್ಪಣ್ಣ ಪೀಠದ ಗುರುಸ್ವಾಮಿ, ರಂಗ ಕಲಾವಿದ ಮಹಾದೇವಸ್ವಾಮಿ ಇದ್ದರು.