ರಾಮನಗರ: ರೈತರ ಮನೆ ಬಾಗಿಲಿಗೆ ಬ್ಯಾಂಕ್ ಸೌಲಭ್ಯ ಕಲ್ಪಿಸುವ ಮೊಬೈಲ್ ಎಟಿಎಂ ವಾಹನಕ್ಕೆ ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಯರೇಹಳ್ಳಿ ಮಂಜು ಅವರು ಇಲ್ಲಿನ ಬಿಡಿಸಿಸಿ ಬ್ಯಾಂಕ್ ಆವರಣದಲ್ಲಿ ಶುಕ್ರವಾರ ಚಾಲನೆ ನೀಡಿದರು.
ಬೆಂಗಳೂರು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನ ಗ್ರಾಹಕರ ವ್ಯವಹಾರದ ಹಿತದೃಷ್ಟಿಯಿಂದ ಮೊಬೈಲ್ ಬ್ಯಾಂಕಿಂಗ್ ಸೇವೆಯನ್ನು ಜಾರಿಗೆ ತರಲಾಗಿದೆ. ಈ ಮೊಬೈಲ್ ಬ್ಯಾಂಕಿಂಗ್ ವಾಹನ ಮೂರು ಜಿಲ್ಲೆಯ ಕಾರ್ಯ ವ್ಯಾಪ್ತಿಯಲ್ಲಿ ಸಂಚಾರ ನಡೆಸಲಿದೆ. ಇದರಿಂದ ಎಲ್ಲಾ ಸದಸ್ಯರು ಮೊಬೈಲ್ ವ್ಯಾನಿನ ಸದುಪಯೋಗ ಪಡೆಯಬಹುದಾಗಿದೆ ಎಂದು ತಿಳಿಸಿದರು.
ಈ ಎಟಿಎಂ ವಾಹನದಲ್ಲಿ ಹಣ ತೆಗೆದುಕೊಳ್ಳುವ ಸೌಲಭ್ಯ ಒದಗಿಸಲಾಗಿದೆ. ಕೆಲವೇ ದಿನಗಳಲ್ಲಿ ಈ ಯಂತ್ರದಲ್ಲೇ ಹಣವನ್ನು ಡೆಪಾಸಿಟ್ ಮಾಡುವ ವ್ಯವಸ್ಥೆಯನ್ನೂ ಅಳವಡಿಸಲಾಗುತ್ತದೆ. ಇದರ ಮೂಲಕವೇ ಬ್ಯಾಂಕ್ ಸಾಲ ಕಟ್ಟುವುದು, ಬೆಸ್ಕಾಂ ಬಿಲ್ ಕಟ್ಟುವುದು ಸೇರಿದಂತೆ ಹಲವು ಸೌಲಭ್ಯಗಳು ದೊರೆಯಲಿವೆ ಎಂದರು.
ಬ್ಯಾಂಕ್ ಸದಸ್ಯರು ಕೆಸಿಸಿ, ಬೆಳೆಸಾಲ, ಉಳಿತಾಯ, ಚಾಲ್ತಿ ಖಾತೆಯಲ್ಲಿನ ಹಣವನ್ನು ವ್ಯಾನ್ನಲ್ಲಿರುವ ಎಂಟಿಎಂನಿಂದ ಪಡೆಯಬಹುದಾಗಿದೆ. ಎಂದು ತಿಳಿಸಿದರು.
ಬ್ಯಾಂಕ್ ಸದಸ್ಯರಾದ ವಿಠಲ್ ರಾವ್, ಯರೇಹಳ್ಳಿ ಶಾಂತ, ಮಹದೇವಯ್ಯ, ಕಾರ್ಯದರ್ಶಿ ಹಾಜರಿದ್ದರು.