ರಾಮನಗರ: ತಾಲೂಕಿನ ತುಂಬೇನಹಳ್ಳಿ ಗ್ರಾಮದಲ್ಲಿ ಆನೆಗಳ ಗುಂಪೊಂದು ದಾಳಿ ನಡೆಸಿ, ಬಾಳೆ ತೋಟ ಹಾಗೂ ಮಾವಿನ ಮರಗಳನ್ನು ನಾಶ ಮಾಡಿವೆ.
ಗ್ರಾಮಕ್ಕೆ ಸಮೀಪದ ಹಂದಿಗೊಂದಿ ಅರಣ್ಯದಿಂದ ಬಂದ ನಾಲ್ಕು ಆನೆಗಳ ಹಿಂಡು ಬೈರೇಗೌಡ ಎಂಬುವರ ಎರಡು ಎಕರೆ ಪ್ರದೇಶದಲ್ಲಿ ಬೆಳೆದ ಎಂಟುನೂರಕ್ಕೂ ಹೆಚ್ಚಿನ ಬಾಳೆಗೊನೆ ಗಿಡಗಳನ್ನು ಸಂಪೂರ್ಣ ನಾಶಪಡಿಸಿವೆ. ಕೃಷ್ಣಪ್ಪ, ಶಿವಪ್ಪ, ರಾಮಣ್ಣ ಎಂಬುವರ ಮಾವಿನ ಮರಗಳೂ ಹಾನಿಗೀಡಾಗಿವೆ.
ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿದರು. ಆನೆಗಳು ಕಾಡಂಚಿನ ಗ್ರಾಮಗಳಲ್ಲಿ ನಿರಂತರವಾಗಿ ದಾಳಿ ಮಾಡುತ್ತಿವೆ. ಅವುಗಳನ್ನು ಕಾಡಿಗೆ ಅಟ್ಟಬೇಕು. ಆಗಿರುವ ಬೆಳೆ ನಷ್ಟಕ್ಕೆ ಪರಿಹಾರ ಕೊಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು.