ರಾಮನಗರ: ಮನುಷ್ಯನ ಪ್ರಮುಖ ಅಂಗ ಕಣ್ಣಿನ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು ಎಂದು ಹಿರಿಯ ಮುಖಂಡ ಎಸ್.ಟಿ. ಕಾಂತರಾಜ್ ಪಟೇಲ್ ಹೇಳಿದರು.
ಇಲ್ಲಿನ ಜಿಲ್ಲಾಸ್ಪತ್ರೆಯಲ್ಲಿ ಭಾರತ್ ವಿಕಾಸ್ ಪರಿಷದ್ ವಾಲ್ಮೀಕಿ ಶಾಖೆ ವತಿಯಿಂದ ಭಾನುವಾರ ಉಚಿತ ಕಣ್ಣು ಪರೀಕ್ಷೆ ಮತ್ತು ಶಸ್ತ್ರಚಿಕಿತ್ಸಾ ಶಿಬಿರ ಹಾಗೂ ಯುನಿಟಿ ಸಂಸ್ಥೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪ್ರತಿಯೊಬ್ಬರೂ ಕಣ್ಣುಗಳನ್ನು ಕಾಲಕಾಲಕ್ಕೆ ತಪಾಸಣೆ ಮಾಡಿಕೊಳ್ಳುವ ಮೂಲಕ ಕಣ್ಣಿನ ಆರೋಗ್ಯ ಕಾಪಾಡಿಕೊಳ್ಳಬೇಕು. ಗ್ರಾಮೀಣ ಭಾಗದಲ್ಲಿ ಬಹಳಷ್ಟು ಮಂದಿ ವೃದ್ಧರು ಕಣ್ಣಿನ ಪೊರೆಯಿಂದ ಬಳಲುತ್ತಿರುತ್ತಾರೆ. ಆರೋಗ್ಯದ ವಿಚಾರದಲ್ಲಿ ಜನಜಾಗೃತಿ ಮೂಡಿಸಲು ಚಿಕಿತ್ಸೆ ಶಿಬಿರಗಳು ಸಹಕಾರಿಯಾಗಿವೆ ಎಂದರು.
ಹಣ ಇಲ್ಲವೆಂದು ಚಿಕಿತ್ಸೆ ಪಡೆಯದೆ ಮನೆಯಲ್ಲೆ ಉಳಿಯುವ ಜನರೂ ಇದ್ದಾರೆ. ಅಂತವರಿಗೆ ಹತ್ತಾರು ಸಾವಿರ ರೂಪಾಯಿ ಖರ್ಚು ಮಾಡುವ ಶಕ್ತಿ ಇರುವುದಿಲ್ಲ. ಇಂತಹ ಶಿಬಿರದ ಮೂಲಕ ಅವರು ದೃಷ್ಟಿಯನ್ನು ಮರಳಿ ಪಡೆಯಬಹುದಾಗಿದೆ ಎಂದರು.
ಅಂಧರ ಬಾಳಿಗೆ ಬೆಳಕಾಗುವ ಕಣ್ಣುಗಳನ್ನು ಮರಣಾನಂತರ ಸುಡುವುದಾಗಲೀ ಅಥವಾ ಮಣ್ಣಿನಲ್ಲಿ ಹೂಳುವುದಾಗಲೀ ಮಾಡದೇ ಅವುಗಳನ್ನು ದಾನ ಮಾಡಬೇಕು. ಹಲವಾರು ಜನರು ವಿವಿಧ ಅಂಗಾಂಗಗಳ ಕಸಿಗಾಗಿ ಕಾಯ್ದು ಕುಳಿತಿದ್ದಾರೆ. ಮಾನವನ ಅಂಗಾಂಗಗಳ ಅವಶ್ಯಕತೆ ಭಾರತದಲ್ಲಿ ಬಹಳಷ್ಟಿದೆ. ಅದರಲ್ಲೂ ಮುಖ್ಯವಾಗಿ ಜೀವನ ಬೆಳಗಲು ಕಣ್ಣು ಅತಿ ಮುಖ್ಯ ಎಂದರು.
ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಆರ್.ಕೆ. ಬೈರಲಿಂಗಯ್ಯ ಮಾತನಾಡಿ, ಮನುಷ್ಯನ ಪಂಚೇಂದ್ರಿಯಗಳಲ್ಲಿ ಕಣ್ಣು ಮುಖ್ಯ ಅಂಗವಾಗಿದ್ದು, ಅದರ ಆರೋಗ್ಯದ ಬಗ್ಗೆ ಪ್ರತಿಯೊಬ್ಬರು ಕಾಳಜಿ ವಹಿಸಬೇಕು. ದೈಹಿಕ ಮತ್ತು ಮಾನಸಿಕವಾಗಿ ಮನುಷ್ಯ ಎಷ್ಟೇ ಸಮರ್ಥನಿದ್ದರೂ ದೃಷ್ಟಿ ಇಲ್ಲದಿದ್ದರೆ ಇತರರಂತೆ ಕೆಲಸ ಮಾಡಲು ಸಾಧ್ಯವಿಲ್ಲ. ನಿದ್ರಾವಸ್ಥೆ ಹೊರತು ಕಣ್ಣು ಸದಾ ಕಾರ್ಯಶೀಲವಾಗಿರುತ್ತದೆ ಎಂದರು.
ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಸಭಾಪತಿ ಎಚ್.ವಿ. ಶೇಷಾದ್ರಿ ಅಯ್ಯರ್ ಮಾತನಾಡಿ, ರಾಮನಗರದಲ್ಲಿ ಭಾರತ್ ವಿಕಾಸ್ ಪರಿಷದ್ ಸ್ಥಾಪನೆಯಾಗಿ 25 ವರ್ಷಗಳಾಗುತ್ತಿದೆ. ಈವರೆಗೆ 124 ನೇತ್ರ ತಪಾಸಣಾ ಶಿಬಿರಗಳನ್ನು ಆಯೋಜಿಸಲಾಗಿದೆ. ಎರಡು ಲಕ್ಷಕ್ಕೂ ಹೆಚ್ಚು ಜನರು ಕಣ್ಣಿನ ತಪಾಸಣೆ ಮಾಡಿಸಿಕೊಂಡಿದ್ದಾರೆ. 13,750 ಜನರಿಗೆ ಕಣ್ಣಿನ ಶಸ್ತ್ರಚಿಕಿತ್ಸೆ ಮಾಡಿಸಲಾಗಿದೆ ಎಂದು ಮಾಹಿತಿ ನೀಡಿದರು.
ಯುನಿಟಿ ಸಂಸ್ಥೆಯ ಸಂಸ್ಥಾಪಕಿ ಪುಷ್ಪಲತಾ ಮಂಜುನಾಥ್ ಮಾತನಾಡಿ, ಸಂಸ್ಥೆಯ ಮೂಲಕ ಸಾಮಾಜಿಕ ಚಟುವಟಿಕೆ ಮಾಡಲಾಗುತ್ತಿದೆ. ಜನರಲ್ಲಿ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ ಅಲ್ಲದೆ ಉಚಿತ ಆರೋಗ್ಯ ಶಿಬಿರಗಳನ್ನು ಆಯೋಜಿಸಲಾಗುತ್ತಿದೆ ಎಂದು ತಿಳಿಸಿದರು.
ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಉಪಸಭಾಪತಿ ವಿ. ಬಾಲಕೃಷ್ಣ, ಭಾರತ್ ವಿಕಾಸ್ ಪರಿಷದ್ ಅಧ್ಯಕ್ಷ ಅಂಬರೀಶ್, ಪ್ರಧಾನ ಕಾರ್ಯದರ್ಶಿ ಸಿ. ರಮೇಶ್ ಹೊಸದೊಡ್ಡಿ, ಪದಾಧಿಕಾರಿಗಳಾದ ಎಂ. ಪರಮಶಿವಯ್ಯ, ಎಂ.ಎಸ್. ಲಾವಣ್ಯ, ಕೆ.ಎಲ್. ಶೇಷಗಿರಿ ರಾವ್, ಇಂದುಮತಿ, ಪ್ರಭು, ಕಿರಣ್ ರಾಜ್, ಕೆ.ಆರ್. ನಾಗೇಶ್, ಎಸ್.ಎಲ್. ವನರಾಜು, ಡಾ. ಪ್ರವೀಣ್, ಜಿಲ್ಲಾ ಲೇಖಕರ ವೇದಿಕೆಯ ಪ್ರಧಾನ ಕಾರ್ಯದರ್ಶಿ ಎಸ್. ರುದ್ರೇಶ್ವರ, ಮಹಿಳಾ ಅಭ್ಯುದಯ ಬ್ಯಾಂಕಿನ ನಿರ್ದೇಶಕಿ ಹೇಮಾವತಿ ಅಂಬರೀಶ್, ಶಿರಡಿ ಸಾಯಿಬಾಬಾ ಸೇವಾ ಟ್ರಸ್ಟಿನ ಅಧ್ಯಕ್ಷ ಎ.ಎನ್. ಪ್ರಕಾಶ್, ಪ್ರಶಾಂತ್ ಅಯ್ಯರ್, ವಿಭಾ ಅಯ್ಯರ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.