ಚನ್ನಪಟ್ಟಣ: ಜಾನಪದ ಕಲೆ ಜೀವಂತವಾಗಿರಲು ಕಲಾವಿದರೇ ಕಾರಣ ಎಂದು ಅಘೋರಿಮಠದ ಡಾ.ನಾಗಬೈರವಿ ಮಾತಾಜಿ ಅಭಿಪ್ರಾಯಪಟ್ಟರು.
ತಾಲ್ಲೂಕಿನ ಹೊಡಿಕೆಹೊಸಹಳ್ಳಿಯಲ್ಲಿ ಗಂಧವತಿ ಟ್ರಸ್ಟ್ ವತಿಯಿಂದ ಶನಿವಾರ ಏರ್ಪಡಿಸಿದ್ದ ಕನ್ನಡ ನಾಡು, ಕಲೆ, ಸಾಹಿತ್ಯ ಮತ್ತು ಸಂಸ್ಕೃತಿ ಉತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕಲೆಗೆ ಜಾತಿ, ಬೇಧವಿಲ್ಲ. ಸಮಾನ ಮನಸ್ಕರಿಂದ ಕಲೆ ಉಳಿಸಿಕೊಳ್ಳಲು ಸಾಧ್ಯ. ಈ ನಿಟ್ಟಿನಲ್ಲಿ ಕಲಾವಿದರು ಕಾರ್ಯಕ್ರಮ ರೂಪಿಸಬೇಕು ಎಂದರು.
ಕಾಂಗ್ರೆಸ್ ಮುಖಂಡ ಶರತ್ ಚಂದ್ರ ಮಾತನಾಡಿ, ನಾಡು-ನುಡಿ, ಜಲ-ಭಾಷೆ ವಿಷಯಕ್ಕೆ ಬಂದಾಗ ಕನ್ನಡಿಗರು ಒಗ್ಗೂಡಿ ಹೋರಾಡುವ ಔದಾರ್ಯ ಹೊಂದಿದ್ದಾರೆ. ಹಾಗೆಯೇ ಕಲಾವಿದರಿಗೆ ತೊಂದರೆ ಬಂದಾಗ ಎಲ್ಲರೂ ಸೇರಿ ಹೋರಾಟ ಮಾಡುವ ಸದ್ಗುಣ ಬೆಳೆಸಿಕೊಳ್ಳಬೇಕು ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎ.ಸಿ.ವೀರೇಗೌಡ ಮಾತನಾಡಿ, ಜಾನಪದ ಗಾಯಕರು ನಾಡಿನ ಹೆಮ್ಮೆ ಪ್ರತೀಕ. ಅವರನ್ನು ಗೌರವಿಸುವುದು ಎಲ್ಲರ ಕರ್ತವ್ಯ ಎಂದರು.
ಚಲನಚಿತ್ರ ನಟ ವೆಂಕಟೇಶ್, ಸಾಹಿತಿ ಎಲೆಕೇರಿ ಡಿ.ರಾಜಶೇಖರ್, ಗಾಯಕ ಮರಿಸ್ವಾಮಿ ಭಾಗವಹಿಸಿದ್ದರು. ಕಲಾವಿದರಾದ ಚಂದ್ರಾಜು, ಹೊಂಬಾಳಯ್ಯ, ಶ್ರೀನಿವಾಸ ರಾಂಪುರ, ಜಾಗೃತಿ ಪುಟ್ಟಸ್ವಾಮಿ ಅವರನ್ನು ಸನ್ಮಾನಿಸಲಾಯಿತು.