ಕನಕಪುರ: ಜಾನಪದ ಕಲೆಯು ನಾಡಿನ ಶ್ರೀಮಂತ ಕಲೆಯಾಗಿದೆ ಎಂದು ರಂಗಕರ್ಮಿ ಎಂ.ಸಿ.ನಾಗರಾಜು ಎಂದು ಅಭಿಪ್ರಾಯಪಟ್ಟರು.
ನಗರದ ಎಕ್ಸ್ ಮುನ್ಸಿಪಲ್ ಸರ್ಕಾರಿ ಪ್ರೌಢಶಾಲೆಯಲ್ಲಿ ಬಿಜ್ಜಳ್ಳಿ ಸುಗ್ಗಿ ಸಾಂಸ್ಕೃತಿಕ ಮತ್ತು ಸಾಮಾಜಿಕ ಸಂಸ್ಥೆ ವತಿಯಿಂದ ಶನಿವರ ನಡೆಸಿದ ಗೀತಗಾಯನ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಗುರು ಹಿರಿಯರ ಮಾರ್ಗದರ್ಶನದಲ್ಲಿ ಕಲಿತ ವಿದ್ಯಾರ್ಥಿಗಳು ಸುಸಂಸ್ಕೃತರಾಗಿ, ಸಾಮಾಜಿಕ ಜವಾಬ್ದಾರಿ ಅರಿತು, ದ್ವೇಷ ರಹಿತ ಪ್ರೀತಿಯ ಬದುಕು ನಡೆಸಬೇಕೆಂದು ಕಿವಿಮಾತು ಹೇಳಿದರು.
ಜಾನಪದ ಸಂಪತ್ತು ಉಳಿವಿಗಾಗಿ ಜನಪದ ಸಾಹಿತ್ಯ, ಕಲೆ ಮತ್ತು ಸಂಸ್ಕೃತಿಯನ್ನು ಸಂಗ್ರಹಿಸಿ, ನಮ್ಮ ಸಂಸ್ಕೃತಿಯನ್ನು ಯುವ ಪೀಳಿಗೆಗೆ ತಿಳಿಸಿಕೊಡಬೇಕಿದೆ ಎಂದರು.
ಧಮ್ಮದೀವಿಗೆ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಮಲ್ಲಿಕಾರ್ಜುನ್ ಮಾತನಾಡಿ ಜನಪದ ಮಾನವ ಸಂಸ್ಕೃತಿಯ ಮೂಲ ಬೇರು ಎಂದು ಹೇಳಿದರು.
‘ಸಾತ್ವಿಕ ಮೌಲ್ಯಗಳ ಅರಿವನ್ನು ಇಂದಿನ ಪೀಳಿಗೆಗೆ ಪರಿಚಯಿಸುವ ದೊಡ್ಡ ಜವಾಬ್ದಾರಿ ಜನಪದ ಕಲಾವಿದರ ಮೇಲಿದೆ. ಇಂತಹ ಕಲಾವಿದರನ್ನು ಗುರುತಿಸಿ ಅವರಿಗೆ ವೇದಿಕೆ ಕಲ್ಪಿಸಿ ಕೊಡುವ ಕೆಲಸ ಮಾಡಬೇಕಿದೆ ಎಂದು ತಿಳಿಸಿದರು.
ಆಕಾಶವಾಣಿ ಕಲಾವಿದ ಚಿಕ್ಕಮರಿಗೌಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಶಿಕ್ಷಕ ಬಸವಯ್ಯ, ಸುಗ್ಗಿ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಕಾಳಯ್ಯ, ಸಾಹಿತಿ ಗೋವಿಂದಸ್ವಾಮಿ, ಕಲಾವಿದರಾದ ಕೆ.ಶಿವರಾಮು, ರಮೇಶ್, ಎ.ಆರ್. ಮನು, ಕುಮಾರ್, ಸಂಜಯ್, ಶಿವಣ್ಣ ಮತ್ತು ತಂಡದವರು ನೀಲಗಾರರ ಪದ ಕಾರ್ಯಕ್ರಮ ನಡೆಸಿಕೊಟ್ಟರು.