ಚನ್ನಪಟ್ಟಣ: ಸಾಧನೆಗೆ ಸಾವಿರಾರು ದಾರಿಗಳಿದ್ದು, ವಿದ್ಯಾರ್ಥಿಗಳಿಗೆ ಸಾಧಿಸುವ ಛಲ, ಮನಸ್ಸಿದ್ದರೆ ಜೀವನದಲ್ಲಿ ಏನನ್ನಾದರೂ ಸಾಧಿಸಬಹುದು ಎಂದು ಜಾನಪದ ಕಲಾವಿದ ಹೊನ್ನಿಗನಹಳ್ಳಿ ಸಿದ್ದರಾಜಯ್ಯ ಹೇಳಿದರು.
ತಾಲ್ಲೂಕಿನ ಹೊನ್ನಾಯಕನಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಜನಪದ ಕಾರ್ಯಕ್ರಮ ಹಾಗೂ ಸಾಧಕರೊಡನೆ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಕಲೆ, ಸಾಹಿತ್ಯ, ಸಂಗೀತ, ಕ್ರೀಡೆ ಹೀಗೆ ಸಾಧಿಸಲು ಹಲವಾರು ಕ್ಷೇತ್ರಗಳಿವೆ. ಆ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು ವಿದ್ಯಾರ್ಥಿಗಳಿಗೆ ಪರಿಚಯಿಸಿ ಅವರ ಅನುಭವಗಳನ್ನು ತಿಳಿಸಿ ವಿದ್ಯಾರ್ಥಿಗಳ ಸಾಧನೆಗೆ ಪ್ರೋತ್ಸಾಹ ನೀಡುತ್ತಿರುವುದು ಉತ್ತಮ ಕಾರ್ಯವಾಗಿದೆ’ ಎಂದರು.
ಕನ್ನಡ ಶಿಕ್ಷಕ ಯೋಗೇಶ್ ಚಕ್ಕೆರೆ ಮಾತನಾಡಿ, ‘ವಿದ್ಯಾರ್ಥಿಗಳು ಯಾವುದಾದರೂ ಒಂದು ಕಲೆಯಲ್ಲಿ ಅಭಿರುಚಿ ಬೆಳೆಸಿಕೊಂಡು ಮುನ್ನಡೆದು ಜೀವನದಲ್ಲಿ ಸಾಧನೆ ಮಾಡಬೇಕು. ಮನುಷ್ಯನ ಜೀವನದಲ್ಲಿ ಕಲಾವಿದನಿಗೆ ದೊಡ್ಡ ಸ್ಥಾನವಿದ್ದು, ಕಲಾವಿದರಾಗಿಯೂ ದೊಡ್ಡ ಸಾಧನೆ ಮಾಡಬಹುದು. ಕಲೆ ಎಲ್ಲರಿಗೂ ಒಲಿಯುವುದಿಲ್ಲ. ಕಲೆಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಆಧುನಿಕ ಸೆಳೆತಕ್ಕೆ ಸಿಲುಕಿ ನಮ್ಮ ಪೂರ್ವಜರ ಆಸ್ತಿಯಾದ ಜನಪದ ಸಂಸ್ಕೃತಿ, ಕಲೆಗಳು ನಶಿಸಿ ಹೋಗುತ್ತಿದ್ದು, ಅದನ್ನು ಉಳಿಸಲು ವಿದ್ಯಾರ್ಥಿಗಳು ಗಮನ ಹರಿಸಬೇಕು’ ಎಂದರು.
ಶಾಲೆಯ ಮುಖ್ಯಶಿಕ್ಷಕ ಡೇನಿಯಲ್ ಸುಜಯ್ ಕುಮಾರ್ ಮಾತನಾಡಿ, ‘ವಿದ್ಯಾರ್ಥಿಗಳಲ್ಲಿರುವ ಪ್ರತಿಭೆ, ಕಲಾವಂತಿಕೆ ಹಾಗೂ ಸೃಜನಶೀಲತೆಯನ್ನು ಪ್ರೋತ್ಸಾಹಿಸಿ ಅವರಲ್ಲಿ ಸಾಧಿಸುವ ಮನೋಭಾವವನ್ನು ಹುಟ್ಟುಹಾಕುವ ಕಾರ್ಯಕ್ರಮಗಳ ಆಯೋಜನೆ ಅಗತ್ಯ’ ಎಂದರು.
ಕಾರ್ಯಕ್ರಮದಲ್ಲಿ ಕಲಾವಿದರು ಜನಪದ ಗೀತೆ, ತತ್ವಪದ, ಲಾವಣಿ, ದೇಶಭಕ್ತಿಗೀತೆ, ಭಾವಗೀತೆ, ಪರಿಸರ ಜಾಗೃತಿ ಗೀತೆಗಳನ್ನು ಹಾಡಿದರು. ಶಾಲೆಯ ಶಿಕ್ಷಕರಾದ ಪುಟ್ಟರಾಜು, ಶೋಭಾ, ಸುಜಾತ, ನೇತ್ರಾ, ಸಂಗಪ್ಪ ಹಾದಿಮನಿ, ಮಾನಸ, ಯೋಗಿತಾ ಭಾಗವಹಿಸಿದ್ದರು.