ಹಾರೋಹಳ್ಳಿ: ಕಾಂಗ್ರೆಸ್ ಪಕ್ಷದ ಯಾವುದೇ ಗ್ಯಾರಂಟಿ ಆಸೆ ಆಮಿಷಗಳಿಗೆ ಕಿವಿಗೊಡಬೇಡಿ ಎಂದು ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಅವರ ಕಿರಿಯ ಪುತ್ರಿ ಶೈಲಜಾ ಹೇಳಿದರು.
ಹಾರೋಹಳ್ಳಿ ತಾಲ್ಲೂಕಿನ ತೋಕಸಂದ್ರ ಗ್ರಾಮದಲ್ಲಿ ಸೋಮವಾರ ಬಿಜೆಪಿ ಅಭ್ಯರ್ಥಿ ಡಾ.ಸಿ.ಎನ್. ಮಂಜುನಾಥ್ ಪರ ಮತಯಾಚಿಸಿ ಮಾತನಾಡಿದ ಅವರು, ‘ನಾವು ಯಾವುದೇ ಆಸೆ ಆಮಿಷಗಳನ್ನು ಒಡ್ದುವವರಲ್ಲ. ಮಂಜುನಾಥ್ ಅವರು ಹೃದಯ ಶ್ರೀಮಂತಿಕೆಯನ್ನು ಹೊಂದಿರುವ ವ್ಯಕ್ತಿ. ಅವರು ಸುಮಾರು 8 ಲಕ್ಷಕ್ಕೂ ಹೆಚ್ಚು ಹೃದ್ರೋಗಿಗಳಿಗೆ ಶಸ್ತ್ರ ಚಿಕಿತ್ಸೆ ಮಾಡಿ ಜೀವ ಉಳಿಸಿದ್ದಾರೆ. ಅಂತಹ ಹೃದಯವಂತನಿಗೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮತ ನೀಡುವುದರ ಮೂಲಕ ಮೋದಿ ಅವರ ಕೈ ಬಲಪಡಿಸಬೇಕು’ ಎಂದು ಮನವಿ ಮಾಡಿದರು.