ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂತೋಷ್ ಆತ್ಮಹತ್ಯೆ ಪ್ರಕರಣ | ಸರ್ಕಾರ ಸತ್ಯಾಂಶ ಬಿಚ್ಚಿಡಲಿ: ಕುಮಾರಸ್ವಾಮಿ

Last Updated 15 ಏಪ್ರಿಲ್ 2022, 4:18 IST
ಅಕ್ಷರ ಗಾತ್ರ

ಚನ್ನಪಟ್ಟಣ: ‘ಗುತ್ತಿಗೆದಾರ ಸಂತೋಷ್ ಸಾವಿನ ಹಿಂದೆ ಅನೇಕ ಅನುಮಾನಗಳು ಮೂಡಿದ್ದು, ಸರ್ಕಾರ ಸೂಕ್ತ ತನಿಖೆ ನಡೆಸುವ ಮೂಲಕ ಜನರ ಮುಂದೆ ಸತ್ಯಾಂಶವನ್ನು ಬಿಚ್ಚಿಡಬೇಕು’ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಒತ್ತಾಯಿಸಿದರು.

ಚನ್ನಪಟ್ಟಣದಲ್ಲಿ ಗುರುವಾರ ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಸಂತೋಷ್ ಸಾವಿನ ವಿಚಾರದಲ್ಲಿ ಜನರಲ್ಲಿ ಅನೇಕ ಪ್ರಶ್ನೆಗಳಿವೆ. ಸತ್ಯಾಂಶವನ್ನು ಹೊರ ತರಲು ತನಿಖೆಯಾಗಬೇಕು. ಇದು ಸರ್ಕಾರದ ಜವಾಬ್ದಾರಿ’ ಎಂದರು.

‘ಸಚಿವ ಸ್ಥಾನಕ್ಕೆ ಕೆ.ಎಸ್.ಈಶ್ವರಪ್ಪ ರಾಜೀನಾಮೆ ನೀಡುವುದು ಉತ್ತಮ. ಅವರು ಇವತ್ತು ಅಥವಾ ನಾಳೆ ರಾಜೀನಾಮೆ ಕೊಡಬಹುದು. ಅವರ ಹೈಕಮಾಂಡ್ ಈ ಬಗ್ಗೆ ಸ್ಪಷ್ಟತೆ ನೀಡುತ್ತಾರೆ. ಈಗಿನ ಪರಿಸ್ಥಿತಿಯಲ್ಲಿ ಮೊದಲು ಅವರು ರಾಜೀನಾಮೆ ನೀಡುವುದು ಸೂಕ್ತ. ಅವರ ಬಗ್ಗೆ ನಾನೇಕೆ ಸಾಫ್ಟ್ ಆಗಲಿ. ನನಗೆ ಯಾವ ರೀತಿಯ ಸಾಫ್ಟ್ ಕಾರ್ನರ್ ಇಲ್ಲ’ ಎಂದರು.

ಮೃತ ವ್ಯಕ್ತಿಯು ₹4 ಕೋಟಿ ವೆಚ್ಚದ ಕಾಮಗಾರಿಯನ್ನು ಸರ್ಕಾರದ ಕಾರ್ಯಾದೇಶ ಇಲ್ಲದೆ, ವರ್ಕ್ ಎಸ್ಟಿಮೇಟ್ ಇಲ್ಲದೇ ಕೆಲಸ ಮಾಡಿದ್ದು ಹೇಗೆ, ಅವರಿಗೆ ಕಾಮಗಾರಿ ಮಾಡಲು ಅನುಮತಿ ಕೊಟ್ಟವರು ಯಾರು ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.

ಯಾವ ಎಂಜಿನಿಯರ್ ಅಥವಾ ಸರ್ಕಾರಿ ಸಂಸ್ಥೆ ಗಮನಕ್ಕೆ ಬಾರದೇ ಪೇಮೆಂಟ್ ನೀಡಬೇಕು ಎಂದರೆ ತಾಂತ್ರಿಕ ಸಮಸ್ಯೆ ಇದೆ. ಇದರ ನಡುವೆ ಪರ್ಸೆಂಟೇಜ್ ಮಾತುಗಳು ಕೇಳಿ ಬರುತ್ತಿವೆ. ಇವೆಲ್ಲದರ ಬಗ್ಗೆ ಸಮಗ್ರ ತನಿಖೆ ಆಗಬೇಕಿದೆ. ಈ ಕಾರಣಕ್ಕೆ ಸಂತೋಷ್ ಸಾವಿನ ಬಗ್ಗೆ ಹಲವು ಅನುಮಾನಗಳು ಕೂಡ ಇವೆ. ಅಲ್ಲದೆ, ಮೃತ ವ್ಯಕ್ತಿಯ ಜತೆ ಇಬ್ಬರು ಸ್ನೇಹಿತರು ಹೋಗಿದ್ದರು ಎಂದು ಗೊತ್ತಾಗಿದೆ. ಸಂತೋಷ್ ಮಾತ್ರ ಒಂದು ಕೊಠಡಿಗೆ ಹೋಗಿದ್ದಾರೆ, ಉಳಿದ ಇಬ್ಬರು ಒಂದು ಕೊಠಡಿಗೆ ಏಕೆ ಹೋಗಿದ್ದರು, ಇವರೆಲ್ಲ ಉಡುಪಿಗೆ ಏಕೆ ಹೋಗಿದ್ದರು, ಸರ್ಕಾರವು ಪ್ರಾಮಾಣಿಕ ಹಾಗೂ ದಕ್ಷ ಅಧಿಕಾರಿಗಳನ್ನು ನೇಮಿಸಿ ತನಿಖೆ ನಡೆಸಿದರೆ ಸತ್ಯಾಸತ್ಯತೆ ಹೊರಬರುತ್ತದೆ ಎಂದರು.

ನಾಯಕರಿಗೆ ತರಾಟೆ: ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರು ಸಾವಿನ ಮನೆಯಲ್ಲಿ ರಾಜಕೀಯ ಮಾಡಲು ಹೊರಟಿದ್ದಾರೆ ಎಂದು ಕುಮಾರಸ್ವಾಮಿ ತರಾಟೆಗೆ ತೆಗೆದುಕೊಂಡರು.

ಶಿವಮೊಗ್ಗದಲ್ಲಿ ಹಿಂದೂ ಕಾರ್ಯಕರ್ತ ಕೊಲೆಯಾದ ಸಂದರ್ಭದಲ್ಲಿ ಬಿಜೆಪಿ ದಂಡೇ ಅಲ್ಲಿಗೆ ಹೋಯಿತು. ಅದಕ್ಕೆ ನಾವೇನು ಕಡಿಮೆ ಎಂದು ಸಾವಿನ ರಾಜಕಾರಣ ಮಾಡಲಿಕ್ಕೆಕಾಂಗ್ರೆಸ್ ನಾಯಕರ ದಂಡೇ ಈಗ ಸಂತೋಷ್ ಅವರ ಮನೆಗೆ ದಾಂಗುಡಿ ಇಟ್ಟಿದೆ. ರಾಜಕೀಯ ನಾಯಕರೆಲ್ಲ ಆ ಸಂತ್ರಸ್ತ ಹೆಣ್ಣುಮಗಳ ಮುಂದೆ ಕೈಕಟ್ಟಿ ಕುಳಿತ ದೃಶ್ಯಗಳನ್ನು ನೋಡಿದರೆ ರಾಜಕೀಯ ಲಾಭ ಮಾಡಿಕೊಳ್ಳುವ ಉದ್ದೇಶ ಬಿಟ್ಟರೆ ಬೇರೇನೂ ಕಾಣದು ಎಂದು ಟೀಕಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT