ಕನಕಪುರ: ಎಚ್.ಡಿ.ಕುಮಾರಸ್ವಾಮಿ ಅವರ ತಪ್ಪು ನಿರ್ಧಾರಗಳಿಂದ ಜೆಡಿಎಸ್ ಇಂದು ಅಧೋಗತಿಗೆ ಬಂದಿದೆಎಂದು ಪಕ್ಷದ ಮುಖಂಡ ಡಿ.ಎಂ.ವಿಶ್ವನಾಥ್ ವಾಗ್ದಾಳಿ ನಡೆಸಿದ್ದಾರೆ.
‘ಪಕ್ಷ ಅಧಿಕಾರಕ್ಕೆ ಬಂದಾಗ ಮತ್ತು ಎರಡು ಬಾರಿ ಮುಖ್ಯಮಂತ್ರಿ ಆದಾಗ ಕುಮಾರಸ್ವಾಮಿ ಅವರು ಪಕ್ಷಕ್ಕಾಗಿ ದುಡಿದ ನಿಷ್ಠಾವಂತ ಮುಖಂಡರು ಮತ್ತು ಕಾರ್ಯಕರ್ತರ ಬದಲಾಗಿ ಉದ್ಯಮಿಗಳು ಮತ್ತು ಹಣವಂತರನ್ನು ಎಂಎಲ್ಸಿ ಮಾಡಿದರು. ಪಕ್ಷದ ನಿಷ್ಠಾವಂತ ಕಾರ್ಯಕರ್ತರು ಮತ್ತು ಮುಖಂಡರನ್ನು ಹತ್ತಿರಕ್ಕೂ ಬಿಟ್ಟುಕೊಳ್ಳಲಿಲ್ಲ ಮತ್ತು ಅಧಿಕಾರವನ್ನೂ ನೀಡಲಿಲ್ಲ ಎಂದು ಅವರು ಆರೋಪಿಸಿದ್ದಾರೆ.
ಇಲ್ಲಿನ ಎಸ್.ಬಿ.ಕಲ್ಯಾಣ ಮಂಟಪದಲ್ಲಿ ಭಾನುವಾರ ನಡೆದ ಸ್ವಾಭಿಮಾನಿ ಸಮಾವೇಶದಲ್ಲಿ ಮಾತನಾಡಿದ ಅವರು, ಪಕ್ಷದಿಂದ ಯಾರು ಬೇಕಾದರೂ ಹೊರಹೋಗಲಿ ಎಂದು ಉಡಾಫೆಯಾಗಿ ಹೇಳುತ್ತಿದ್ದಾರೆ.
‘ಮುಂದೆ ನಾನು ಈ ಪಕ್ಷದಲ್ಲಿ ಇರಲಿ, ಇಲ್ಲದಿರಲಿ ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ. ತಾಲ್ಲೂಕಿನಲ್ಲಿ ಜನರಿಗೆ ಸಮಸ್ಯೆಗೆ ಸ್ಪಂದಿಸುವ ಕೆಲಸ ಮಾಡುತ್ತೇನೆ’ ಎಂದು ತಿಳಿಸಿದರು.
ಒಕ್ಕಲಿಗರ ಚುನಾವಣೆಯಲ್ಲೂ ಅನ್ಯಾಯ ಮಾಡಿದರು: ‘ನಾವು ಯಾವತ್ತೂ ಮ್ಯಾಚ್ ಫಿಕ್ಸಿಂಗ್ ರಾಜಕಾರಣ ಮಾಡಿಲ್ಲ. ಆದರೂ ಒಕ್ಕಲಿಗರ ಸಂಘದ ಚುನಾವಣೆಯಲ್ಲಿ ಸೋಲಿಸಿದರು. ಗೆದ್ದಿದ್ದ ನನಗೆ ಎಣಿಕೆಯಲ್ಲಿ ಮೋಸ ಮಾಡಿ ಅನ್ಯಾಯ ಮಾಡಿದರು’ ಎಂದು ವಿಶ್ವನಾಥ್ ಆರೋಪಿಸಿದರು.
ವರಿಷ್ಠರ ಧೋರಣೆ ಬದಲಾಗಲಿ: ‘ಜೆಡಿಎಸ್ ಪಕ್ಷದ ವರಿಷ್ಠರು ತೆಗೆದುಕೊಳ್ಳುವ ನಿರ್ಧಾರಗಳಿಂದ ತಾಲ್ಲೂಕಿನಲ್ಲಿ ಪಕ್ಷದ ಕಾರ್ಯಕರ್ತ ಮುಖಂಡರು ಯಾವ ಸ್ಥಿತಿಯಲ್ಲಿದ್ದಾರೆ ಎಂಬುದು ಗೊತ್ತಾಗುತ್ತಿಲ್ಲ. ಇದು ವಿಶ್ವನಾಥ್ ಒಬ್ಬರ ಸಮಸ್ಯೆಯಲ್ಲ, ಪಕ್ಷಕ್ಕಾಗಿ ದುಡಿದ ಹತ್ತಾರು ಮುಖಂಡರ ಸಮಸ್ಯೆಯಾಗಿದೆ. ಇಲ್ಲಿ ಪಕ್ಷ ಉಳಿಯಬೇಕಾದರೆ ವರಿಷ್ಠರು ತಮ್ಮ ಧೋರಣೆ ಬದಲಾಯಿಸಿಕೊಳ್ಳಬೇಕು. ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮುನ್ನ ಕಾರ್ಯಕರ್ತರ ಬಗ್ಗೆ ಯೋಚಿಸಬೇಕು’ ಎಂದು ಬಮೂಲ್ ಮಾಜಿ ಅಧ್ಯಕ್ಷ ಕೆ.ಎಸ್.ಸುಧಾಕರ್ ಹೇಳಿದರು.