ರಾಮನಗರ: ತಾಲ್ಲೂಕಿನ ಅವ್ವೇರಹಳ್ಳಿ ರೇವಣಸಿದ್ದೇಶ್ವರ ಬೆಟ್ಟದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಸ್ವಸಹಾಯ ಸಂಘದ ಹುಲಿಕೆರೆ-ಗುನ್ನೂರು ಗ್ರಾ.ಪಂ. ವ್ಯಾಪ್ತಿಯ ಕೆಲವು ಸದಸ್ಯರಿಗೆ ಆರೋಗ್ಯ ರಕ್ಷಾ ವಿಮಾ ಕಾರ್ಡ್ ವಿತರಿಸಲಾಯಿತು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಪಿ. ಶ್ರೀನಿವಾಸ್ ಮಾತನಾಡಿ, ಸಂಸ್ಥೆ ಸಂಘದ ಸದಸ್ಯರಿಗೆ ಅರೋಗ್ಯ ಚಿಕಿತ್ಸೆಗೆ ನೆರವಾಗಲು ಆರೋಗ್ಯ ವಿಮಾ ಯೋಜನೆ ಜಾರಿಗೆ ತಂದಿದೆ. ನಮ್ಮ ಸ್ವಸಹಾಯ ಸಂಘಗಳ ಸದಸ್ಯರಿಗೆ ಮಾತ್ರ ಆರೋಗ್ಯ ರಕ್ಷಾ ವಿಮಾ ಯೋಜನೆ ಇದಾಗಿದೆ. 79 ವರ್ಷ ಮೀರದ ಸದಸ್ಯರಿಗೆ ಅನ್ವಯವಾಗುತ್ತದೆ. ಸದಸ್ಯರ ವಿಮಾ ಕಂತು ಒಂದು ವರ್ಷಕ್ಕೆ ₹ 245 ಆಗಿದ್ದು, ಸಂಘ ₹ 125 ಶುಲ್ಕ ಭರಿಸಲಿದೆ. ಫಲಾನುಭವಿ ₹ 100 ಭರಿಸಬೇಕು. 24 ಗಂಟೆ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯಬಹುದಾದ ಕಾಯಿಲೆಗಳಿಗೆ ಮಾತ್ರ ವಿಮಾ ಯೋಜನೆ ದೊರೆಯಲಿದೆ. ₹ 10 ಸಾವಿರ ವರೆಗೆ ಮಾತ್ರ ಯೋಜನೆಯಲ್ಲಿ ಲಾಭ ದೊರೆಯುತ್ತದೆ.
ಈ ಯೋಜನೆಯಡಿ ಒಬ್ಬ ಸದಸ್ಯರಿಗೆ ಮಾತ್ರ ಚಿಕಿತ್ಸೆಗೆ ಅವಕಾಶ ಇದೆ. ಕುಟುಂಬದ ಸದಸ್ಯರಿಗೆ ವಿಮಾ ಯೋಜನೆ ದೊರೆಯಲು ಸದಸ್ಯರು ಸಂಪೂರ್ಣ ಸುರಕ್ಷಾ ಯೋಜನೆಯಡಿ ₹ 750 ಪಾವತಿಸಿ ವಿಮಾ ಯೋಜನೆ ಮಾಡಬೇಕು. ಇದರಲ್ಲಿ ₹ 20 ಸಾವಿರದವರೆಗೆ ಕುಟುಂಬ ಸದಸ್ಯರು ಚಿಕಿತ್ಸೆ ಪಡೆಯಲು ಅವಕಾಶವಿದೆ ಎಂದರು.
ರಾಮನಗರ ತಾಲ್ಲೂಕು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ಸೂರ್ಯನಾರಾಯಣ್ ಮಾತನಾಡಿ, ತಾಲೂಕಿನಲ್ಲಿ 9,760 ಸದಸ್ಯರು ವಿಮಾ ಯೋಜನೆಗೆ ಹೆಸರು ನೋಂದಾಯಿಸಿದ್ದಾರೆ. ಸಂಪೂರ್ಣ ಆರೋಗ್ಯ ಸುರಕ್ಷಾ ಯೋಜನೆಗೆ 114 ಜನ ನೊಂದಣಿ ಮಾಡಿಸಿದ್ದಾರೆ ಎಂದು ತಿಳಿಸಿದರು.
ರಾಮನಗರ ತಾಲ್ಲೂಕು ಪಂಚಾಯಿತಿ ಸದಸ್ಯ ರೇಣುಕಾಪ್ರಸಾದ್, ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ತಮ್ಮಣ್ಣ, ಗ್ರಾ.ಪಂ ಸದಸ್ಯ ಲಿಂಗರಾಜು, ಕೈಲಾಂಚ ವಲಯ ಮೇಲ್ವಿಚಾರಕ ಪ್ರವೀಣ್ಕುಮಾರ್, ಒಕ್ಕೂಟದ ಅಧ್ಯಕ್ಷ ತೋಂಟಾರಾಧ್ಯ, ಸೇವಾ ಪ್ರತಿನಿಧಿ ಸೌಭಾಗ್ಯಾ, ಸಂಘಗಳ ಪದಾಧಿಕಾರಿಗಳು ಇದ್ದರು.