ಚನ್ನಪಟ್ಟಣ: ಇಂದಿನ ವಿದ್ಯಾರ್ಥಿಗಳು ಉನ್ನತ ಹುದ್ದೆ ಪಡೆಯಲು ಉತ್ತಮವಾದ ವ್ಯಾಸಂಗ ಮಾಡಬೇಕು ಎಂದು ಲೀಡರ್ಸ್ ಅಕಾಡೆಮಿಯ ಲೀಡರ್ ಶಿವಕುಮಾರ್ ಕಿವಿಮಾತು ಹೇಳಿದರು.
ತಾಲ್ಲೂಕಿನ ವಂದಾರಗುಪ್ಪೆಯ ಹಾರಿಜನ್ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳಿಗೆ ಸಮರ್ಥ ಸಮಗ್ರ ನಗರ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆ ವತಿಯಿಂದ ಆಯೋಜಿಸಿದ್ದ ‘ವಾರ್ಷಿಕ ಪರೀಕ್ಷೆಯ ಪೂರ್ವ ಸಿದ್ಧತೆಯ ತರಬೇತಿ’ ಕಾರ್ಯಕ್ರಮದಲ್ಲಿ ಮಾತನಾಡಿದರು.
ಗ್ರಾಮೀಣ ಭಾಗದ ವಿದ್ಯಾರ್ಥಿಗಳು, ಕೂಲಿ ಕಾರ್ಮಿಕರ ಮಕ್ಕಳು ಶಿಕ್ಷಣವನ್ನು ಪಡೆಯಬೇಕಾದರೆ ಹಲವಾರು ಕಷ್ಟ ಕಾರ್ಪಣ್ಯಗಳನ್ನು ಅನುಭವಿಸುತ್ತಿದ್ದಾರೆ. ಅಂತಹ ವಿದ್ಯಾರ್ಥಿಗಳು ಉನ್ನತವಾದ ಶಿಕ್ಷಣವನ್ನು ಪಡೆಯಲಾಗದೆ ಕೂಲಿ ಮಾಡಿ ಜೀವನ ಸಾಗಿಸುತ್ತಿರುವ ಉದಾಹರಣೆ ಸಾಕಷ್ಟಿವೆ ಎಂದರು.
ಶಾಲಾ ಕಾಲೇಜುಗಳಲ್ಲಿ ಲೀಡರ್ಸ್ ಅಕಾಡೆಮಿಯ ಸದಸ್ಯರು ಪ್ರತಿ ವರ್ಷವು ಶಿಕ್ಷಣ ಕುರಿತು ಹಾಗೂ ಪರೀಕ್ಷೆಯನ್ನು ಎದುರಿಸಬೇಕಾದರೆ ಯಾವ ರೀತಿಯಲ್ಲಿ ತಯಾರಾಗಬೇಕು ಎಂಬ ಉದ್ದೇಶದಿಂದ ತರಬೇತಿಯನ್ನು ನೀಡುತ್ತಿದ್ದಾರೆ. ಇದರ ಜೊತೆಗೆ ಯಾವ ಯಾವ ವಿಷಯಗಳಲ್ಲಿ ಯಾವ ರೀತಿ ಅಂಕ ಸಂಪಾದನೆ ಮಾಡಬೇಕು ಎಂಬುದರ ಅರಿವು ಮೂಡಿಸಲು 8ನೇ ತರಗತಿಯಿಂದ ಎಸ್ಎಸ್ಎಲ್ಸಿವರೆಗೆ ತರಬೇತಿ ನೀಡಲಾಗುತ್ತಿದೆ ಎಂದು ತಿಳಿಸಿದರು.
ಪ್ರಾಂಶುಪಾಲೆ ಮಂಜುಳರಾಜ್ ಅಧ್ಯಕ್ಷತೆ ವಹಿಸಿದ್ದರು. ಶಾಲೆಯ ಸಂಸ್ಥಾಪಕ ಎಚ್.ಎಲ್. ಪಾರ್ಥಸಾರಥಿ, ಸಂಸ್ಥೆಯ ಅಧ್ಯಕ್ಷೆ ರಜನಿ, ಕಾರ್ಯದರ್ಶಿ ಎಂ.ಎಸ್. ಈಶ್ವರಪ್ಪ, ದೈಹಿಕ ಶಿಕ್ಷಕ ಮನು ಚೇತನ್, ಶಿಕ್ಷಕಿ ಲತಾ ಭಾಗವಹಿಸಿದ್ದರು.