ಬಿಡದಿ: ಗೃಹರಕ್ಷಕ ದಳದ ಸಿಬ್ಬಂದಿ ನಿಸ್ವಾರ್ಥ ಸೇವೆಯ ಮೂಲಕ ಉತ್ತಮ ಸೇವೆ ನೀಡುತ್ತಿದ್ದಾರೆ ಎಂದು ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಕೆ.ಬಿ.ಮಂಜುನಾಥ್ ಹೇಳಿದರು.
ಇಲ್ಲಿನ ಚೌಕಿಮಠದ ಆವರಣದಲ್ಲಿ ಜಿಲ್ಲಾ ಗೃಹ ರಕ್ಷಕ ದಳದ ವತಿಯಿಂದ ಭಾನುವಾರ ನಡೆದ ಅಖಿಲ ಭಾರತ ಗೃಹ ರಕ್ಷಕ ದಳ ದಿನಾಚರಣೆ- ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಗೃಹರಕ್ಷಕ ದಳವು ಪೊಲೀಸ್ ಇಲಾಖೆಗೆ ಪೂರಕ ಪಡೆಯಾಗಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ತಿಳಿಸಿದರು.
ರಾಜ್ಯದಲ್ಲಿ ಅಗ್ನಿಶಾಮಕ ದಳ ಮತ್ತು ಗೃಹರಕ್ಷಕ ದಳಗಳೆರಡೂ ಅಣ್ಣ ತಮ್ಮಂದಿರಂತೆ ಕೆಲಸವನ್ನು ಮಾಡುತ್ತಿವೆ. ಗೃಹ ರಕ್ಷಕರು ಸಾರ್ವಜನಿಕರ ಆಸ್ತಿ ಪಾಸ್ತಿಗಳ ರಕ್ಷಣೆ, ಸಂಚಾರ ನಿಯಂತ್ರಣ, ಪ್ರವಾಹ ಮತ್ತು ಬೆಂಕಿ ಅನಾಹುತಗಳ ಸಂದರ್ಭದಲ್ಲಿ ಜನರಿಗೆ ಸೂಕ್ತ ರಕ್ಷಣೆ ಒದಗಿಸುತ್ತಿದ್ದಾರೆ ಎಂದು ತಿಳಿಸಿದರು.
ಕೆಎಸ್ಆರ್ಟಿಸಿ ಡಿಪೊ, ಜಾತ್ರೆಗಳು, ಸಭೆ ಸಮಾರಂಭಗಳು ಸೇರಿದಂತೆ ಪೊಲೀಸ್, ಅಬಕಾರಿ ಇಲಾಖೆ, ಕಾರಾಗೃಹ ಮತ್ತು ಬಂದೂಬಸ್ತ್ ಗಳ ಕರ್ತವ್ಯವನ್ನು ಸಮರ್ಪಕವಾಗಿ ನಿಭಾಯಿಸುತ್ತಿದ್ದಾರೆ ಎಂದು ಅವರು ಹೇಳಿದರು.
ಸಾಮಾನ್ಯ ವ್ಯಕ್ತಿಗಳಿಗೆ ತರಬೇತಿ ನೀಡಿ ಅಣಿಗೊಳಿಸಿದ ನಂತರ ನಿಸ್ವಾರ್ಥ ಸೇವೆ ಸಲ್ಲಿಸುವ ಮೂಲಕ ಪೋಲೀಸ್ ಇಲಾಖೆಯ ಒಂದು ಭಾಗವಾಗಿ ಕೆಲಸ ಮಾಡುವ ಗೃಹರಕ್ಷಕ ಮತ್ತು ರಕ್ಷಕಿಯರಿಗೆ ನೀಡುವ ಗೌರವಧನ ಕಡಿಮೆ ಇರುವ ಬಗ್ಗೆ ಹಿರಿಯ ಅಧಿಕಾರಿಗಳು ಮತ್ತು ಸರ್ಕಾರದ ಮಟ್ಟದಲ್ಲಿ ತೀರ್ಮಾನಿಸಬೇಕಿದೆ ಎಂದರು.
ಕರ್ತವ್ಯ ನಿರತ ನಿಧನ ಹೊಂದಿದ ಗೃಹರಕ್ಷಕ ಸಿಬ್ಭಂದಿಗಳಾದ ಗೋಪಾಲಕೃಷ್ಣ, ಸಿದ್ದಲಿಂಗಮ್ಮ, ಕುಳ್ಳೇಗೌಡ, ನಾಗರಾಜು, ಕೃಷ್ಣಮೂರ್ತಿ, ಜಗದೀಶ, ಬಸವರಾಜು ಅವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು.
ಚೌಕಿಮಠದ ಹುಚ್ಚಪ್ಪ ಸ್ವಾಮೀಜಿ, ಗೃಹ ರಕ್ಷಕದಳದ ಜಿಲ್ಲಾ ಭೋಧಕ ಎಸ್.ಆರ್.ಗಾಯಕ್ವಾಡ್, ಜಿಲ್ಲಾ ಕಚೇರಿ ಸಹಾಯಕ ರವಿ, ಕಂಪನಿ ಕಮ್ಯಾಂಡರ್ ವೆಂಕಟೇಶ್, ಘಟಕ ಅಧಿಕಾರಿಗಳಾದ ವಿಜಯ್ ಕುಮಾರ್, ಕುಮಾರ್, ಶಿವಲಿಂಗಯ್ಯ, ವೆಂಕಟೇಶ್ ಇದ್ದರು.