ಕನಕಪುರ: ಆಸ್ಪತ್ರೆಯಲ್ಲಿ ಬಳಸಿ ಬಿಸಾಡುವ ಅನುಪಯುಕ್ತ ಮೆಡಿಕಲ್ ಬಯೋ ವೇಸ್ಟನ್ನು ಖಾಲಿ ಇರುವ ಜಮೀನಿಗೆ ರಾತ್ರಿ ವೇಳೆ ಸುರಿದು ಬೆಂಕಿ ಹಚ್ಚಿರುವುದು ಕನಕಪುರ ತಾಲ್ಲೂಕಿನ ರಾಯಸಂದ್ರ ಗ್ರಾಮದಲ್ಲಿ ನಡೆದಿದೆ.
ರಾಯಸಂದ್ರ ಗ್ರಾಮದ ಭರತ್ಕುಮಾರ್ ಎಂಬುವರಿಗೆ ಸೇರಿದ ಜಮೀನಿಗೆ ರಾತ್ರಿ ವೇಳೆಯಲ್ಲಿ ಲಾರಿಯಲ್ಲಿ ತ್ಯಾಜ್ಯ ಸುರಿದು ಬೆಂಕಿ ಹಚ್ಚಲಾಗಿದೆ.
ಮೆಡಿಕಲ್ ತ್ಯಾಜ್ಯವನ್ನು ವೈಜ್ಞಾನಿಕವಾಗಿ ಸಂಸ್ಕರಣೆ ಮಾಡಬೇಕು, ಆ ರೀತಿ ಮಾಡಲು ಏಜೆನ್ಸಿ ತೆಗೆದುಕೊಂಡಿರುತ್ತಾರೆ. ಆದರೆ ವೈಜ್ಞಾನಿಕವಾಗಿ ಸಂಸ್ಕರಣೆ ಮಾಡುವುದರಿಂದ ಹೆಚ್ಚಿನ ಹಣ ಖರ್ಚಾಗುತ್ತದೆ ಎಂಬ ಕಾರಣಕ್ಕೆ ಈ ರೀತಿ ಜಮೀನಿಗೆ ತಂದು ಸುರಿಯಲಾಗುತ್ತಿದೆ.
ಜಮೀನಿನಲ್ಲಿ ಹಾಕಿರುವುದಲ್ಲದೆ ರಾತ್ರಿ ವೇಳೆ ಅದಕ್ಕೆ ಬೆಂಕಿ ಹಚ್ಚಿ ಹೋಗಿದ್ದಾರೆ. ಹೀಗಾಗಿ ಕೆಟ್ಟ ವಾಸನೆ ಬರುತ್ತದೆ. ಪರಿಸರ ಮಾಲಿನ್ಯವಾಗುತ್ತಿದೆ. ಇದನ್ನು ತಡೆಗಟ್ಟಬೇಕೆಂದು ಜಮೀನಿನ ಭರತ್ಕುಮಾರ್ ಪೊಲೀಸರು ಮತ್ತು ಪಂಚಾಯಿತಿಗೆ ದೂರು ನೀಡಿದ್ದಾರೆ.
ತ್ಯಾಜ್ಯವನ್ನು ಸುರಿದು ಅದಕ್ಕೆ ಬೆಂಕಿ ಹಚ್ಚಿದ್ದರಿಂದ 5 ತೆಂಗಿನ ಮರಗಳು ಸುಟ್ಟು ಹೋಗಿವೆ. ಆಗಾಗಿ ತ್ಯಾಜ್ಯ ತಂದು ಸುರಿಯುತ್ತಿರುವವನ್ನು ಪತ್ತೆಹಚ್ಚಿ ತಮಗಾಗಿರುವ ನಷ್ಟವನ್ನು ಕೊಡಿಸುವುದಲ್ಲದೆ ಮುಂದೆ ತ್ಯಾಜ್ಯ ಸುರಿಯದಂತೆ ಕ್ರಮ ಕೈಗೊಳ್ಳಬೇಕೆಂದು ದೂರಿನಲ್ಲಿ ಒತ್ತಾಯಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.