ಕನಕಪುರ: ತಾಲ್ಲೂಕಿನ ಕಬ್ಬಾಳು ಗುರುವಿನಪುರ ರಸ್ತೆಯ ಕಾಮಗಾರಿ ಮಂಗಳವಾರ ಮತ್ತೆ ಆರಂಭಗೊಂಡಿದೆ.
ಹಣ ಪಡೆದು ಕಾಮಗಾರಿಯನ್ನು ಅರ್ಧಕ್ಕೆ ನಿಲ್ಲಿಸಿ, ವಿಳಂಬಕ್ಕೆ ಕಾರಣರಾದ ಅಧಿಕಾರಿಗಳ ವಿರುದ್ಧ ಎಸಿಬಿ ವಿಶೇಷ ನ್ಯಾಯಾಲಯದಲ್ಲಿ ಸಾಮಾಜಿಕ ಕಾರ್ಯಕರ್ತ ಕಂಚನಹಳ್ಳಿ ರವಿಕುಮಾರ್ ಪ್ರಕರಣ ದಾಖಲಿಸಲು ಮುಂದಾಗುತ್ತಿದ್ದಂತೆ ಅಧಿಕಾರಿಗಳು ಎಚ್ಚೆದ್ದಿದ್ದಾರೆ.
ಕಬ್ಬಾಳು ಗುರುವಿನಪುರ ರಸ್ತೆಯನ್ನು ಅಭಿವೃದ್ಧಿಪಡಿಸಿ ಡಾಂಬರ್ ಹಾಕಲು ಗುತ್ತಿಗೆ ಪಡೆದವರು ಒಂದೂವರೆ ವರ್ಷದ ಹಿಂದೆ ಕಾಮಗಾರಿಯನ್ನು ಪ್ರಾರಂಭಿಸಿ ರಸ್ತೆಗೆ ಜಲ್ಲಿಯನ್ನು ಹಾಕಿ ನಂತರ ಕಾಮಗಾರಿಯನ್ನು ಸ್ಥಗಿತಗೊಳಿಸಿದ್ದರು. ಇದರಿಂದ ರಸ್ತೆಯಲ್ಲಿ ಕಬ್ಬಾಳು ದೇವಾಲಯಕ್ಕೆ ಬೈಕ್ಗಳಲ್ಲಿ ಬರುವ ಭಕ್ತರು ಬಿದ್ದು ಗಾಯಗೊಂಡಿರುವ ಬಗ್ಗೆ ಮಾಹಿತಿ ಸಂಗ್ರಹಿಸಿದ ರವಿಕುಮಾರ್ ಕಾಮಗಾರಿ ವಿಳಂಬವನ್ನು ಪ್ರಶ್ನಿಸಿ ಸಂಬಂಧಪಟ್ಟ ಇಲಾಖೆಗೆ ದೂರು ನೀಡಿದ್ದರು.
ಈ ಮಾಹಿತಿಯನ್ನು ಅರಿತ ಪಿಡಬ್ಲ್ಯೂಡಿ ಇಲಾಖೆ ಅಧಿಕಾರಿಗಳು ಮಂಗಳವಾರ ಬೆಳಿಗ್ಗೆಯ ಕಬ್ಬಾಳು ಗುರುವಿನಪುರ ರಸ್ತೆಗೆ ಭೇಟಿನೀಡಿ ಪರಿಶೀಲಿಸಿ ಗುತ್ತಿಗೆದಾರರಿಂದ ಕಾಮಗಾರಿಯನ್ನು ಪ್ರಾರಂಭಿಸಿದ್ದಾರೆ.
‘ಕಬ್ಬಾಳು ಗುರುವಿನಪುರ ರಸ್ತೆಯಲ್ಲಿ ಸಾಕಷ್ಟು ವಾಹನ ಸವಾರರು ಬಿದ್ದು, 100ಕ್ಕೂ ಹೆಚ್ಚುಮಂದಿ ಗಾಯಗೊಂಡಿದ್ದಾರೆ. ಗುತ್ತಿಗೆದಾರ ಕಾಮಗಾರಿ ಮಾಡಿರುವುದಕ್ಕಿಂತ ಹೆಚ್ಚಿನ ಹಣ ಪಡೆದಿದ್ದಾರೆ. ಇಲಾಖೆ ಅಧಿಕಾರಿಗಳು ಕಾಮಗಾರಿ ಸ್ಥಗಿತವಾಗಿದ್ದರೂ ಸಂಬಂಧಪಟ್ಟರಿಂದ ಕೆಲಸ ಮಾಡಿಸದೆ ಬಿಟ್ಟಿರುವುದೆ ಅಪಘಾತಕ್ಕೆ ಕಾರಣವಾಗಿದೆ. ಇದರ ಬಗ್ಗೆ ದೂರುಕೊಟ್ಟಿದ್ದು ಎಸಿಬಿಯಲ್ಲಿ ಪ್ರಕರಣ ದಾಖಲಿಸಿ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಲು ಹೋರಾಟ ನಡೆಸುತ್ತೇನೆ’ ಎಂದು ಕಂಚನಹಳ್ಳಿ ರವಿಕುಮಾರ್ ಹೇಳಿದರು.
ಪಿಡಬ್ಲ್ಯೂಡಿ ಇಲಾಖೆ ಅಧಿಕಾರಿಗಳನ್ನು ಈ ಸಂಬಂಧ ಮಾಹಿತಿ ಪಡೆಯಲು ಸಂಪರ್ಕಿಸಿದಾಗ ಸಂಪರ್ಕಕ್ಕೆ ಸಿಗಲಿಲ್ಲ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.