ಕನಕಪುರ: ನಗರದ ಶಕ್ತಿ ದೇವತೆ ಶ್ರೀಕೆಂಕೇರಮ್ಮ ದೇವಿಯ ಅಗ್ನಿಕೊಂಡೋತ್ಸವ ಬುಧವಾರ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.
ಹಲಸಿನಮರದೊಡ್ಡಿ ಮತ್ತು ಕೋಟೆ ಗ್ರಾಮದ ಜನತೆ ಒಟ್ಟಾಗಿ ಕೆಂಕೇರಮ್ಮ ದೇವಿಯ ಜಾತ್ರೆ ಮತ್ತು ಅಗ್ನಿಕೊಂಡೋತ್ಸವವನ್ನು ಆಚರಿಸಿದರು. ಉತ್ಸವದ ಅಂಗವಾಗಿ ಮಂಗಳವಾರ ರಾತ್ರಿ ಎಳವಾರ ಕಾರ್ಯಕ್ರಮ ನಡೆಯಿತು.
ಎತ್ತಿನ ಬಂಡಿಯ ಎಳವಾರವು ನಗರದ ದೊಡ್ಡಿಬೀದಿ, ಮೈಸೂರು ಮುಖ್ಯ ರಸ್ತೆ, ಕೋಟೆ, ಸಂಗಮ ರಸ್ತೆಯ ಮಾರ್ಗವಾಗಿ ಮೆರವಣಿಗೆ ನಡೆಸಿ ಕೆಂಕೇರಮ್ಮ ದೇವಾಲಯವನ್ನು ತಲುಪಿತು.
ಈ ಸಂದರ್ಭದಲ್ಲಿ ಮನೆಯ ಮುಂದೆ ಬಂದ ಎಳವಾರಕ್ಕೆ ಜನತೆ ಪೂಜೆಯನ್ನು ನೆರವೇರಿಸಿದರು. ಬುಧವಾರ ಬೆಳಗಿನ ಜಾವ ಅರ್ಕಾವತಿ ನದಿಯಲ್ಲಿ ಗಂಗಾ ಪೂಜೆಯನ್ನು ನೆರವೇರಿಸಿ ಅಲ್ಲಿಂದ ದೇವರನ್ನು ಮೆರವಣಿಗೆಯಲ್ಲಿ ಕರೆತರಲಾಯಿತು.
ದೇವಸ್ಥಾನದ ಅರ್ಚಕ ಕುಮಾರ್ ಕೆಂಕೇರಮ್ಮ ದೇವಿಯ ಅಗ್ನಿಕೊಂಡ ಹಾಯ್ದರು.