ಮಾಗಡಿ (ರಾಮನಗರ): ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಜಯದೇವ ಆಸ್ಪತ್ರೆಯ ನಿವೃತ್ತ ನಿರ್ದೇಶಕ ಡಾ. ಸಿ.ಎನ್. ಮಂಜುನಾಥ್ ಅವರನ್ನು ಬಿಜೆಪಿಯಿಂದ ಕಣಕ್ಕಿಳಿಸಲು ಮುಂದಾಗಿರುವ ಜೆಡಿಎಸ್ ನವರು ಮಂಜುನಾಥ್ ಅವರನ್ನು ಹರಕೆ ಕುರಿ ಮಾಡಲು ಮುಂದಾಗಿದ್ದಾರೆ ಎಂದ ಶಾಸಕ ಎಚ್.ಸಿ. ಬಾಲಕೃಷ್ಣ ಹೇಳಿದರು.
ಪಟ್ಟಣದ ಕೋಟೆ ಮೈದಾನದಲ್ಲಿ ತಾಲ್ಲೂಕು ಆಡಳಿತವು ಗುರುವಾರ ಹಮ್ಮಿಕೊಂಡಿದ್ದ ಗ್ಯಾರಂಟಿ ಯೋಜನೆ ಫಲಾನುಭವಿಗಳ ಸಮಾವೇಶ ಹಾಗೂ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ತಮ್ಮದೇ ಸ್ವಂತ ಪಕ್ಷ ಇದ್ದರೂ ಎಚ್.ಡಿ. ದೇವೇಗೌಡರು ಮತ್ತು ಅವರ ಮಗ ಎಚ್.ಡಿ. ಕುಮಾರಸ್ವಾಮಿ ಅವರಿಗೆ, ತಮ್ಮ ಮನೆಯ ಅಳಿಯನನ್ನು ತಮ್ಮ ಜೆಡಿಎಸ್ ಪಕ್ಷದಲ್ಲಿ ನಿಲ್ಲಿಸುವ ಯೋಗ್ಯತೆ ಇಲ್ಲವಾಗಿದೆ. ಆ ಮಟ್ಟಕ್ಕೆ ಅವರ ಪಕ್ಷ ತಲುಪಿದೆ‘ ಎಂದು ವ್ಯಂಗ್ಯವಾಡಿದರು.
‘ಡಿ.ಕೆ. ಸುರೇಶ್ ಅವರನ್ನು ಎದುರಿಸಲು ಸಾಧ್ಯವಾಗದೆ ಕುಮಾರಸ್ವಾಮಿ ಅವರು, ಮಂಡ್ಯಕ್ಕೆ ಓಡಿ ಹೋಗಲು ಮುಂದಾಗಿದ್ದಾರೆ. ಬಿಜೆಪಿಯ ಸಿ.ಪಿ. ಯೋಗೇಶ್ವರ್ ಚನ್ನಪಟ್ಟಣ ಬಿಟ್ಟು ಕದಲುವುದಿಲ್ಲ ಎನ್ನುತ್ತಿದ್ದಾರೆ‘ ಎಂದರು.
‘ವೈದ್ಯರಾಗಿರುವ ಡಾ. ಮಂಜುನಾಥ್ ಅವರ ಬಗ್ಗೆ ನನಗೆ ಅಪಾರ ಗೌರವವಿದೆ. ಆದರೆ, ಯಾರು ಯಾವ ಕಸುಬು ಮಾಡಬೇಕೊ ಅದನ್ನು ಮಾಡಿದರೆ ಮಾತ್ರ ಗೌರವ. ಅದು ಬಿಟ್ಟು ಬೇರೆ ಕೆಲಸ ಮಾಡಲು ಬಂದರೆ ಏನಾಗುತ್ತದೆ ಎಂದು ನಾನೇನು ಹೇಳಬೇಕಿಲ್ಲ‘ ಎಂದು ಹೇಳಿದರು.
‘ಲೋಕಸಭಾ ಚುನಾವಣೆಯಲ್ಲಿ ಸುರೇಶ್ ಅವರಿಗೆ ನಾವೇನಾದರೂ ಮೋಸ ಮಾಡಿದರೆ, ಅದು ನಮಗೆ ನಾವೇ ಮಾಡಿಕೊಂಡಂತೆ. ಅವರಿಗೆ ಮೋಸವಾದರೆ ಮುಂದಿನ ಚುನಾವಣೆಯಲ್ಲಿ ಜನ ನನಗೂ ಮತ ಹಾಕುವುದು ಬೇಡ‘ ಎಂದರು.