ಚನ್ನಪಟ್ಟಣ: ತಾಲ್ಲೂಕಿನ ದೊಡ್ಡಮಳೂರು ಗ್ರಾಮದಲ್ಲಿ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕದ ಏಳು ದಿನಗಳ ವಾರ್ಷಿಕ ವಿಶೇಷ ಶಿಬಿರ ಆಯೋಜಿಸಲಾಗಿತ್ತು.
ಒಂದು ವಾರ ನಡೆದ ಶಿಬಿರದ ವೇಳೆ ಗ್ರಾಮದ ದೇವಸ್ಥಾನದ ಆವರಣ, ಸರ್ಕಾರಿ ಶಾಲೆಯ ಆವರಣ, ಕಲ್ಯಾಣಿ ಸ್ವಚ್ಛಗೊಳಿಸಲಾಯಿತು. ಸ್ವಚ್ಛ ಭಾರತ್ ಅಭಿಯಾನದ ಅಂಗವಾಗಿ ಗ್ರಾಮದಲ್ಲಿ ಜಾಗೃತಿ ಜಾಥಾ, ಪರಿಸರ ಜಾಗೃತಿ ಜಾಥಾ ನಡೆಸಲಾಯಿತು.
ಸಾರ್ವಜನಿಕ ಆಸ್ಪತ್ರೆಯ ಆಪ್ತ ಸಮಾಲೋಚಕ ನವೀನ್ ಕುಮಾರ್, ರಾಮನಗರ ಸರ್ಕಾರಿ ಮಹಿಳಾ ಪಾಲಿಟೆಕ್ನಿಕ್ ಕಾಲೇಜಿನ ವಿಜ್ಞಾನ ಉಪನ್ಯಾಸಕಿ ಬಿ.ಆರ್. ಅನುರಾಧಾ, ಜಿಲ್ಲಾ ಅಗ್ನಿ ಶಾಮಕ ದಳದ ಅಧಿಕಾರಿಗಳಾದ ವೆಂಕಟೇಶ್ ಹಾಗೂ ಸುಕೇಶ್ ಉಪನ್ಯಾಸ ಹಾಗೂ ಪ್ರಾತ್ಯಕ್ಷಿಕೆ ಕಾರ್ಯಕ್ರಮ ನಡೆಸಿಕೊಟ್ಟರು.
ಯೋಗಗುರು ವಿ.ಆರ್.ನಂದಕುಮಾರ್ ಅಷ್ಟಾಂಗ ಯೋಗ ನಡೆಸಿಕೊಟ್ಟರು. ಮತದಾನದ ಬಗ್ಗೆ ಗ್ರಾಮಸ್ಥರಲ್ಲಿ ಜಾಗೃತಿ ಜಾಥಾ ಕಾರ್ಯಕ್ರಮ ನಡೆಸಿಕೊಡಲಾಯಿತು.
ಸಮಾರೋಪ ಸಮಾರಂಭದಲ್ಲಿ ರಾಮನಗರ ಸರ್ಕಾರಿ ಪಾಲಿಟೆಕ್ನಿಕ್ ಪ್ರಾಂಶುಪಾಲ ಉಮೇಶ್, ಪತ್ರಕರ್ತ ಎಚ್.ಎಂ. ರಮೇಶ್ ಇತರರು ಭಾಗವಹಿಸಿದ್ದರು. ಶಿಬಿರದ ಸಂಯೋಜನಾಧಿಕಾರಿಯಾಗಿ ಕಾಲೇಜಿನ ಇಂಗ್ಲೀಷ್ ಉಪನ್ಯಾಸಕಿ ಸಿ.ಆರ್. ಸುಷ್ಮಾ ಕಾರ್ಯನಿರ್ವಹಿಸಿದರು.