ಬಿಡದಿ: ‘ಕೋವಿಡ್ ಲಸಿಕೆ ನೀಡುವ ಜವಾಬ್ದಾರಿಯನ್ನು ಖಾಸಗಿಯವರಿಗೆ ನೀಡುವ ಮೂಲಕ ಕೇಂದ್ರ ಮತ್ತು ರಾಜ್ಯ ಸರ್ಕಾರ ಜನರ ಜೀವದ ಜೊತೆ ಚೆಲ್ಲಾಟವಾಡುತ್ತಿವೆ’ ಎಂದು ಸಂಸದ ಡಿ.ಕೆ. ಸುರೇಶ್ ವಾಗ್ದಾಳಿ ನಡೆಸಿದರು.
ಪಟ್ಟಣದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ವ್ಯಾಕ್ಸಿನ್ ಖರೀದಿಗೂ ಕೇಂದ್ರ ಹಾಗೂ ರಾಜ್ಯ ಸರ್ಕಾರ ಪ್ರತ್ಯೇಕ ದರ ನಿಗದಿ ಮಾಡಿವೆ. ಖಾಸಗಿ ಆಸ್ಪತ್ರೆಗಳಿಗೂ ಲಸಿಕೆ ನೀಡಲು ಅವಕಾಶ ನೀಡಲಾಗಿದೆ. ಕೇಂದ್ರ ಸರ್ಕಾರ ನೀಚ ವ್ಯವಹಾರದಲ್ಲಿ ತೊಡಗಿದೆ ಎಂದು ಟೀಕಿಸಿದರು.
ಕೋವಿಡ್ ಲಾಕ್ಡೌನ್ನಿಂದ ಕೂಲಿ ಇಲ್ಲ. ಜೀವನ ನಡೆಸಲು ಸಾಧ್ಯವಾಗದ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಸಾಮಾನ್ಯ ಜನರು ₹ 2 ಸಾವಿರ ಪಾವತಿಸಿ ವ್ಯಾಕ್ಸಿನ್ ಪಡೆಯಲು ಹೇಗೆ ಸಾಧ್ಯ. ಲಸಿಕೆ ಹೆಸರಿನಲ್ಲೂ ಲೂಟಿ ಮಾಡಲು ಹೊರಟಿರುವುದು ನಾಚಿಕೆ ಗೇಡಿನ ಸಂಗತಿ ಎಂದು ಟೀಕಿಸಿದರು.
ಕೋವಿಡ್ ನಿರ್ವಹಣೆಯಲ್ಲಿ ಕೇಂದ್ರ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಪ್ರಧಾನಿ ಮೋದಿ ಅವರು ಎಲ್ಲದಕ್ಕೂ ಮೌನವಹಿಸಿದ್ದಾರೆ. ಮೌನ ಬಿಟ್ಟು ಜನರಲ್ಲಿ ಆತ್ಮವಿಶ್ವಾಸ ತುಂಬುವ ಕೆಲಸ ಮಾಡಬೇಕು. ರಾಜ್ಯಗಳ ಜೊತೆಗೆ ಸ್ಪಂದಿಸಿ ಅಗತ್ಯ ಪ್ರಮಾಣದಷ್ಟು ವ್ಯಾಕ್ಸಿನ್ ಪೂರೈಸುವ ಕೆಲಸ ಮಾಡಬೇಕು ಎಂದರು.