ಚನ್ನಪಟ್ಟಣ: ಸಂವಿಧಾನವನ್ನು ಡಾ.ಬಿ.ಆರ್.ಅಂಬೇಡ್ಕರ್ ಒಬ್ಬರೇ ರಚಿಸಿಲ್ಲ ಎನ್ನುವ ಕೈಪಿಡಿಯನ್ನು ತಂದಿರುವ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಉಮಾಶಂಕರ್ ಅವರನ್ನು ಈ ಕೂಡಲೆ ವೃತ್ತಿಯಿಂದ ವಜಾಗೊಳಿಸಬೇಕು ಎಂದು ಒತ್ತಾಯಿಸಿ ತಾಲ್ಲೂಕಿನ ದಲಿತ ಮುಖಂಡರು ಹಾಗೂ ಕಸ್ತೂರಿ ಕರ್ನಾಟಕ ಜನಪರ ವೇದಿಕೆಯ ಪದಾಧಿಕಾರಿಗಳು ಮಂಗಳವಾರ ಪಟ್ಟಣದ ಖಾಸಗಿ ಬಸ್ ನಿಲ್ದಾಣದ ಬಳಿ ಪ್ರತಿಭಟನೆ ನಡೆಸಿದರು.
ಪಟ್ಟಣದ ಖಾಸಗಿ ಬಸ್ ನಿಲ್ದಾಣದ ಬಳಿಯ ಸರ್ಕಲ್ ನಲ್ಲಿ ಪ್ರತಿಭಟನೆ ನಡೆಸಿದ ಪ್ರತಿಭಟನಕಾರರು, ‘ಸರ್ಕಾರದ ಗಮನಕ್ಕೂ ತಾರದೆ ಕೈಪಿಡಿ ರಚನೆ ಮಾಡಿರುವ ಅವರ ಸರ್ಕಾರ ಕೂಡಲೆ ಶಿಸ್ತು ಕ್ರಮ ಜರುಗಿಸಬೇಕು’ ಎಂದು ಒತ್ತಾಯಿಸಿದರು.
ವೇದಿಕೆಯ ರಾಜ್ಯ ಘಟಕದ ಅಧ್ಯಕ್ಷ ರಮೇಶ್ ಗೌಡ ಮಾತನಾಡಿ, ‘ಭಾರತರತ್ನ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಕೊಡುಗೆಯನ್ನು ಇಡೀ ಜಗತ್ತೆ ಸ್ಮರಿಸುತ್ತಿದೆ. ಸಂವಿಧಾನದಲ್ಲಿ ಮಹಿಳೆಯರು, ಮಕ್ಕಳು, ಅಲ್ಪಸಂಖ್ಯಾತರು, ದಲಿತರು, ಕಾರ್ಮಿಕರು, ಹಿಂದುಳಿದವರೆಲ್ಲರಿಗೂ ರಕ್ಷಣೆ ಹಾಗೂ ಅನೇಕ ರಾಜಕೀಯ ಪ್ರಯೋಗಗಳಿಗೆ, ಸಾಮಾಜಿಕ ಬದಲಾವಣೆಗೆ, ಆರ್ಥಿಕ ಸುಧಾರಣೆಗೆ, ಶೈಕ್ಷಣಿಕ ಪ್ರಗತಿಗೆ, ಧಾರ್ಮಿಕ ಸ್ವಾತಂತ್ರ್ಯಕ್ಕೆ, ಸಾಂಸ್ಕೃತಿಕ ಬೆಳವಣಿಗೆಗೆ ಮುಕ್ತ ಅವಕಾಶಗಳನ್ನು ಒದಗಿಸಲಾಗಿದೆ. ಇಂತಹ ಸಂವಿಧಾನ ಬರೆದವರು ಅಂಬೇಡ್ಕರ್ ಅಲ್ಲ ಎನ್ನುವ ಕೈಪಿಡಿ ತರುವುದು ಮೂರ್ಖತನ’ ಎಂದರು.
ದಲಿತ ಮುಖಂಡ ಮತ್ತೀಕೆರೆ ಹನುಮಂತಯ್ಯ ಮಾತನಾಡಿ, ‘ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಜಗತ್ತೆ ಅಪ್ಪಿ, ಒಪ್ಪಿ ಗೌರವಿಸುತ್ತಿರುವ ಈ ಸಂದರ್ಭದಲ್ಲಿ ದೇಶದ ಕೆಲವು ಕೋಮುವಾದಿ ವ್ಯಕ್ತಿಗಳು ಅಂಬೇಡ್ಕರ್ ಅವರನ್ನು ಮೀಸಲಾತಿಯ ಜನಕ, ದಲಿತ ನಾಯಕ ಎಂಬ ಹಣೆಪಟ್ಟಿ ಕಟ್ಟುಲು ಚಿತಾವಣೆ ನಡೆಸುತ್ತಿದ್ದಾರೆ. ಇದು ಅಕ್ಷಮ್ಯ’ ಎಂದರು.
ದಲಿತ ಮುಖಂಡ ಅಕ್ಕೂರು ಶೇಖರ್ ಮಾತನಾಡಿ, ‘ಸಂವಿಧಾನ ಜಾರಿಗೊಂಡ ನಂತರ ಜಾತಿ ವ್ಯವಸ್ಥೆ ಬದಲಾಗಿದೆ. ಸಂವಿಧಾನದಿಂದಾಗಿ ಅನೇಕ ಬದಲಾವಣೆ ತರಲು ಸಹಕಾರಿಯಾಗಿದೆ. ಇಂತಹ ವಿಶಿಷ್ಟ ಅವಕಾಶವನ್ನು ಸಂವಿಧಾನ ನೀಡಿದೆ. ಸಂವಿಧಾನದ ಅಂಶಗಳು ದೇಶದ ಅಭಿವೃದ್ಧಿಯಾಗಿ ರೂಪಿತವಾಗಿವೆ. ಡಾ.ಬಿ.ಆರ್.ಅಂಬೇಡ್ಕರ್ ಅವರು ಸಂವಿಧಾನ ರಚನೆ ಮಾಡಿದ್ದರಿಂದ ಇಂದು ನಾವೆಲ್ಲರೂ ನಿರ್ಭಯವಾಗಿ ಬದುಕುವಂತಾಗಿದೆ. ಅಂಬೇಡ್ಕರ್ಗೆ ಅಪಮಾನ ಮಾಡುವ ಕೈಪಿಡಿಯನ್ನು ಹೊರತಂದಿರುವ ಅವಿವೇಕಿ ಅಧಿಕಾರಿಯನ್ನು ಈ ಕೂಡಲೇ ವಜಾಗೊಳಿಸಬೇಕು’ ಎಂದು ಆಗ್ರಹಿಸಿದರು.
ಡಿ.ಎಸ್.ಎಸ್. ಸಂಚಾಲಕ ವೆಂಕಟೇಶ್, ಬಹುಜನ ವಿದ್ಯಾರ್ಥಿ ಸಂಘದ ಜಿಲ್ಲಾ ಸಂಯೋಜಕ ಎಸ್. ಕುಮಾರ್, ಮುಖಂಡರಾದ ನೀಲಸಂದ್ರ ಸಿದ್ದರಾಮು, ಕುಮಾರ್, ಜೈಕಾಂತ್, ಕೂಡ್ಲೂರು ಸಿದ್ದರಾಮು, ಕೋಟೆ ಶ್ರೀನಿವಾಸ್, ಬಿ.ಎಸ್.ಪಿ. ಶಿವರಾಂ, ಅಬ್ಬೂರು ಮಹೇಶ್, ಅಬ್ಬೂರು ಚಂದ್ರನಾಥ್, ಸಿದ್ದರಾಜು, ನಾರಾಯಣಸ್ವಾಮಿ, ಶ್ರೀನಿವಾಸ್, ಶಿವಕುಮಾರ್, ಕಿರಣ್, ಭರತ್, ವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷ ಬೇವೂರು ಯೋಗೀಶ್ ಗೌಡ, ಮಂಡ್ಯ ಜಿಲ್ಲಾಧ್ಯಕ್ಷ ಉಮಾಶಂಕರ್, ರಾಜ್ಯ ಉಪಾಧ್ಯಕ್ಷ ಶ್ರೀಧರ್, ರಾಜ್ಯ ಯುವ ಘಟಕದ ಅಧ್ಯಕ್ಷ ಶ್ರೀನಿವಾಸ್, ಉಪಾಧ್ಯಕ್ಷ ರಂಜಿತ್ ಗೌಡ ಭಾಗವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.