ರಾಮನಗರ: ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ವೈದ್ಯಕೀಯ ಕಾಲೇಜನ್ನು ಕನಕಪುರಕ್ಕೆ ಸ್ಥಳಾಂತರ ಮಾಡಿರುವುದನ್ನು ವಿರೋಧಿಸಿ, ನಗರದಲ್ಲಿ ಶುಕ್ರವಾರ ಪ್ರತಿಭಟನಾ ರ್ಯಾಲಿ ನಡೆಸಿದ ಕೆಂಗಲ್ ಹನುಮಂತಯ್ಯ ವೈದ್ಯಕೀಯ ಕಾಲೇಜು ಹೋರಾಟ ಸಮಿತಿ ಹಾಗೂ ವಿವಿಧ ಸಂಘಟನೆಗಳ ಮುಖಂಡರು ಜಿಲ್ಲಾಧಿಕಾರಿ ಡಾ. ಅವಿನಾಶ್ ಮೆನನ್ ರಾಜೇಂದ್ರನ್ ಅವರಿಗೆ ಮನವಿ ಸಲ್ಲಿಸಲು ಕಚೇರಿ ಬಳಿ ಸುಮಾರು ಮುಕ್ಕಾಲು ತಾಸು ಕಾದರು.
ಆದರೂ, ಜಿಲ್ಲಾಧಿಕಾರಿ ಬರಲಿಲ್ಲ. ಬದಲಿಗೆ ಹೆಚ್ಚುವರಿ ಜಿಲ್ಲಾಧಿಕಾರಿ ಶಿವಾನಂದ ಮೂರ್ತಿ ಅವರನ್ನು ಕಳಿಸಿ ಕೊಟ್ಟರು. ಇದರಿಂದ ಆಕ್ರೋಶಗೊಂಡ ಹೋರಾಟಗಾರರು ಕಚೇರಿಯೊಳಕ್ಕೆ ನುಗ್ಗಲು ಯತ್ನಿಸಿದರು. ಪೊಲೀಸರು ಕೂಡಲೇ ಬಾಗಿಲು ಬಂದ್ ಮಾಡಿ ತಡೆದರು. ಹಿಂಬಾಗಿಲಿನಿಂದ ಒಳಬಂದ ಕೆಲವರು ತಳಮಹಡಿಯಲ್ಲಿ ಕುಳಿತು ಪ್ರತಿಭಟನೆ ನಡೆಸಿದರು.
ಜಿಲ್ಲಾಧಿಕಾರಿ ಅವರು ವಿಡಿಯೊ ಕಾನ್ಫರೆನ್ಸ್ ನಲ್ಲಿ ಇದ್ದಾರೆ. ಅರ್ಧದಲ್ಲೇ ಬಿಟ್ಟು ಬರಲು ಸಾಧ್ಯವಿಲ್ಲ. ಹಾಗಾಗಿ, ಮುಗಿಸಿಕೊಂಡು ಬರುವವರೆಗೂ ಕಾಯುವಂತೆ ಮನವಿ ಮಾಡಿದ್ದಾರೆ ಎಂದು ಎಡಿಸಿ ತಿಳಿಸಿದರು.
ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲಾಧಿಕಾರಿ ಕಚೇರಿ ಬಳಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.
ವಿಧಾನ ಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್, ಮಾಜಿ ಶಾಸಕ ಎ. ಮಂಜು, ಮುಖಂಡರಾದ ಗೌತಮ್ ಗೌಡ, ರೈಡ್ ನಾಗರಾಜ್, ನರಸಿಂಹಮೂರ್ತಿ, ರಮೇಶ ಗೌಡ ಸೇರಿದಂತೆ ಮುಖಂಡರು ಇದ್ದರು.
ಇದನ್ನೂ ಓದಿ: ರಾಮನಗರ | ವೈದ್ಯಕೀಯ ಕಾಲೇಜು ಸ್ಥಳಾಂತರದ ವಿರುದ್ಧ ಆಕ್ರೋಶ; ಅಂಗಡಿಗಳು ಬಂದ್