ರಾಮನಗರ: ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ವೈದ್ಯಕೀಯ ಕಾಲೇಜನ್ನು ಕನಕಪುರಕ್ಕೆ ಸ್ಥಳಾಂತರ ಮಾಡಿರುವುದನ್ನು ವಿರೋಧಿಸಿ, ಕೆಂಗಲ್ ಹನುಮಂತಯ್ಯ ವೈದ್ಯಕೀಯ ಕಾಲೇಜು ಹೋರಾಟ ಸಮಿತಿ ಶುಕ್ರವಾರ ಹಮ್ಮಿಕೊಂಡಿರುವ ರಾಮನಗರ ಬಂದ್ ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.
ಬೆಳಿಗ್ಗೆಯಿಂದಲೇ ಅಂಗಡಿಗಳು ಬಂದ್ ಆಗಿದ್ದವು. ಮಾರುಕಟ್ಟೆ ವ್ಯಾಪಾರಿಗಳು, ಬೀದಿ ಬದಿ ವ್ಯಾಪಾರಿಗಳು ಸೇರಿದಂತೆ ಬಹುತೇಕರು ತಮ್ಮ ವ್ಯಾಪಾರ- ವಹಿವಾಟು ಬಂದ್ ಮಾಡಿದ್ದರು. ಸರ್ಕಾರಿ ಬಸ್ ಗಳು ಸೇರಿದಂತೆ ಖಾಸಗಿ ವಾಹನಗಳಷ್ಟೇ ಸಂಚರಿಸಿದವು. ಸ್ಥಳೀಯ ಆಟೊಗಳ ಸೇವೆಯಲ್ಲಿ ವ್ಯತ್ಯಯವಾಗಿತ್ತು. ಆಸ್ಪತ್ರೆ ಮತ್ತು ಔಷಧಧ ಅಂಗಡಿಗಳು ತೆರೆದಿದ್ದವು.
ಕೆಂಪೇಗೌಡ ವೃತ್ತದಲ್ಲಿ ಜಮಾಯಿಸಿದ ಹೋರಾಟಗಾರರು ಅಲ್ಲಿಂದ ಮೆರವಣಿಗೆಯಲ್ಲಿ ಐಜೂರು ವೃತ್ತದಲ್ಲಿ ಟೈಯರ್ ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು. ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಂಸದ ಡಿ.ಕೆ. ಸುರೇಶ್, ಶಾಸಕ ಇಕ್ಬಾಲ್ ಹುಸೇನ್ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ಅಲ್ಲಿಂದ ಹಳೇ ಬಸ್ ನಿಲ್ದಾಣ, ಮಾರ್ಕೆಟ್, ಕಾಮಣ್ಣನ ಗುಡಿ ವೃತ್ತ, ಎಂ.ಜಿ. ರಸ್ತೆ, ವಾಟರ್ ಟ್ಯಾಂಕ್, ಎಸ್.ಪಿ. ಕಚೇರಿ ವೃತ್ತದ ಮಾರ್ಗವಾಗಿ ಜಿಲ್ಲಾಧಿಕಾರಿ ಕಚೇರಿಗೆ ಬಂದ ಹೋರಾಟಗಾರರ, ಅಲ್ಲಿ ಜಮಾಯಿಸಿದರು. ಮಾರ್ಗದುದ್ದಕ್ಕೂ ಪ್ರತಿಭಟನಾ ಫಲಕಗಳನ್ನು ಪ್ರದರ್ಶಿಸಿದರು.
ವಿಧಾನ ಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್, ಮಾಜಿ ಶಾಸಕ ಎ. ಮಂಜು, ಮುಖಂಡರಾದ ಗೌತಮ್ ಗೌಡ, ರೈಡ್ ನಾಗರಾಜ್, ನರಸಿಂಹಮೂರ್ತಿ, ರಮೇಶ ಗೌಡ, ಕನ್ನಡಪರ ಸಂಘಟನೆಗಳು, ರೈತ ಸಂಘ ಹಾಗೂ ವಿವಿಧ ಸಂಘಟನೆಗಳ ಸದಸ್ಯರು ರ್ಯಾಲಿಯಲ್ಲಿ ಭಾಗವಹಿಸಿದ್ದರು.