ರಾಮನಗರ: ಬೆಂಗಳೂರು ಹೊರವಲಯದ ನೈಸ್ ಜಂಕ್ಷನ್ ಬಳಿ ಶುಕ್ರವಾರ ತಡರಾತ್ರಿ ಆನೇಕಲ್ ರೌಡಿಶೀಟರ್ ಸುನಿಲ್ ಕುಮಾರ್ ಎಂಬುವರನ್ನು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿದ್ದಾರೆ.
ಇನೋವಾ ಕಾರಿನಲ್ಲಿ ಬಂದಿದ್ದ ಆರೋಪಿಗಳು ಸುನಿಲ್ ಕಾರಿನ ಟೈರ್ ಪಂಕ್ಚರ್ ಮಾಡಿ ಆತನನ್ನು ಕಾರಿನಿಂದ ಹೊರಗೆಳೆದು ಮಾರಾಕಾಸ್ತ್ರಗಳಿಂದ ಕೊಚ್ಚಿ ಕೊಂದಿದ್ದಾರೆ. ಬಿಡಿಸಲು ಹೋದ ಕಾರ್ ಚಾಲಕನ ಮೇಲೂ ಹಲ್ಲೆಗೆ ಯತ್ನಿಸಿದ್ದಾರೆ.
ಈ ಅಪರಾಧ ಕೃತ್ಯವು ಸಮೀಪದ ಹೋಟೆಲ್ ಒಂದರ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಹತ್ಯೆಗೀಡಾದ ಸುನಿಲ್ ಆನೇಕಲ್ ವ್ಯಾಪ್ತಿಯಲ್ಲಿ ರೌಡಿಶೀಟರ್ ಆಗಿದ್ದು, ಕೊಲೆ ಪ್ರಕರಣವೊಂದರ ಆರೋಪಿ ಆಗಿದ್ದರು ಎಂದು ಪೊಲೀಸರು ತಿಳಿಸಿದರು. ಕುಂಬಳಗೂಡು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.