ಮಾಗಡಿ (ರಾಮನಗರ): ತಾಲ್ಲೂಕಿನ ಸೋಲೂರಿನ ಚಿಲುಮೆ ಮಠದ ಬಸವಲಿಂಗ ಸ್ವಾಮೀಜಿ (62) ಅವರ ಶವವು ಸೋಮವಾರ ಬೆಳಿಗ್ಗೆ ಮಠದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಮುಂಜಾನೆ ಎಂದಿನಂತೆ ಧನುರ್ಮಾಸದ ಪೂಜೆ ಹಾಗೂ ಲಿಂಗಪೂಜೆಗೆ ಸಿದ್ಧತೆ ನಡೆಸಿದ್ದ ಶ್ರೀಗಳು ಬಳಿಕ ಮಠದ ಕೊಠಡಿಯೊಂದರ ಕಿಟಕಿ ಬಳಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಶವದ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಕುದೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಶ್ರೀಗಳು ಭಕ್ತರೊಬ್ಬರ ಮನೆಯಲ್ಲಿ ಪೂಜೆ ಮುಗಿಸಿ ಭಾನುವಾರ ರಾತ್ರಿ ಮಠಕ್ಕೆ ವಾಪಸ್ ಆಗಿದ್ದರು. ನಂತರದಲ್ಲಿ ಏಕಾಏಕಿ ಸಾವನ್ನಪ್ಪಿರುವುದು ಭಕ್ತರಲ್ಲಿ ದಿಗ್ರ್ಭಮೆ ಮೂಡಿಸಿದೆ. ಶ್ರೀಗಳು ಕೆಲವು ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಈ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ.